– ಇಟಲಿ ವ್ಯಕ್ತಿಯಿಂದ ವೈರಸ್ ಅಟ್ಯಾಕ್
– ಚಿಕಿತ್ಸೆ ಪಡೆಯುತ್ತಿರೋ ಮಗ
– ಕಣ್ಣೀರಿನಲ್ಲಿ ಕುಟುಂಬ
ನವದೆಹಲಿ: ಮಹಾಮಾರಿ ಕೊರೊನಾ ದೇಶಾದ್ಯಂತ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ 61ಕ್ಕೆ ಹೆಚ್ಚಿದೆ. ಅಲ್ಲದೆ ಓರ್ವ ಭಾರತೀಯ ಮೃತನಾಗುವ ಮೂಲಕ ಜನರಲ್ಲಿ ಇನ್ನೂ ಭಯದ ವಾತಾವರಣ ನಿರ್ಮಾಣ ಮಾಡಿದೆ.
ಮಹಾಮಾರಿ ಕೊರೊನಾಗೆ ಭಾರತೀಯರೊಬ್ಬರು ಸಾವನ್ನಪ್ಪಿದ್ದಾರೆ. ಭಾರತೀಯ ಮೂಲದ ಬ್ರಿಟನ್ನಲ್ಲಿದ್ದ ಮನೋಹರ್ ಕೃಷ್ಣ ಪ್ರಭು(80) ಸಾವನ್ನಪ್ಪಿದ ವ್ಯಕ್ತಿ. ಇವರು ವ್ಯಾಟ್ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.
ಈ ಮೂಲಕ ಪ್ರಭು ಅವರು ಕೊರೊನಾ ವೈರಸ್ನಿಂದ ಸಾವನ್ನಪ್ಪಿದ ಆರನೇ ವ್ಯಕ್ತಿ ಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇವರು ಕೃಷ್ಣನ ಭಕ್ತರಾಗಿದ್ದು, ವ್ಯಾಟ್ಫೋರ್ಡ್ನಲ್ಲಿರುವ ಭಕ್ತವೇದಾಂತಕ್ಕೆ ಯಾವಾಗಲೂ ಭೇಟಿ ನೀಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಇಂಗ್ಲೆಂಡ್ನ ಚೀಫ್ ಮೆಡಿಕಲ್ ಆಫೀಸರ್ ಪ್ರೊಫೆಸರ್ ಕ್ರಿಸ್ ವ್ಹಿಟ್ಟಿ ಪ್ರತಿಕ್ರಿಯಿಸಿ, ಕೊರೊನಾ ವೈರಸ್ನಿಂದಾಗಿ ಇಂಗ್ಲೆಂಡ್ನಲ್ಲಿ 6ನೇ ಸಾವು ಸಂಭವಿಸಿದೆ ಎಂದು ಹೇಳಲು ವಿಷಾಧಿಸುತ್ತೇನೆ. ಇವರಿಗೆ ಎನ್ಎಸ್ಎಚ್ ಟ್ರಸ್ಟ್ ನ ವೆಸ್ಟ್ ಹರ್ಟ್ಫೋರ್ಡ್ಶೈರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೈರಸ್ ಇಂಗ್ಲೆಂಡ್ನಾದ್ಯಂತ ವ್ಯಾಪಿಸಿದ್ದು, ಈ ಕುರಿತು ಎಲ್ಲ ಎಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಮೂಲದವರು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದ್ದು, ಬ್ರಿಟನ್ನಲ್ಲಿ ಸಾವನ್ನಪ್ಪಿದ್ದಾರೆ. ಇವರ ಮಗನಿಗೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೃಷ್ಣನ ಭಕ್ತ ಪರಶುರಾಮ್ ದಾಸ್ ಪ್ರತಿಕ್ರಿಯಿಸಿ, ಮನೋಹರ್ ಅವರಿಗೆ ಇಟಾಲಿಯನ್ ವ್ಯಕ್ತಿಯಿಂದ ಕೊರೊನಾ ಹರಡಿದೆ. ಇಟಲಿ ವ್ಯಕ್ತಿಯೊಬ್ಬ ಆಡಿಯೋ ಉಪಕರಣ ಪಡೆಯಲು ಮನೋಹರ್ ಅವರ ಮಗನ ಬಳಿ ಬಂದಿದ್ದ ಈ ವೇಳೆ ವೈರಸ್ ಅಟ್ಯಾಕ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಸೋಂಕು ತಗುಲಿದ್ದರಿಂದಾಗಿ ಮನೋಹರ್ ಅವರು 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಮ್ಮ ದೇವಸ್ಥಾನದ ಕೆಲವು ಹುಡುಗರು ಸಹ ಅವರನ್ನು ನೋಡಲು ಹೋಗಿದ್ದರು. ಅವರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಮನೋಹರ್ ಕುಟುಂಬಸ್ಥರು ಪ್ರತಿಕ್ರಿಯಿಸಿ, ನಾವು ಪ್ರೀತಿಯ ತಂದೆ, ಅಜ್ಜ ಹಾಗೂ ಸಹೋದರನನ್ನು ಕಳೆದುಕೊಂಡಿದ್ದೇವೆ. ಅವರಿಗೆ ವಯಸ್ಸು ಹೆಚ್ಚಾಗಿದ್ದರಿಂದ ಹಾಗೂ ಕೊರೊನಾ ವ್ಯಾಪಿಸಿದ್ದರಿಂದ ಬದುಕಿಸಲು ಸಾಧ್ಯವಾಗಲಿಲ್ಲ. ಜನರಿಗೆ ಹೆಚ್ಚು ಸಹಾಯ ಮಾಡುತ್ತಿದ್ದರು. ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ಹೀಗಾಗಿ ನಮ್ಮ ತಂದೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನಾವು ಮಾತ್ರವಲ್ಲ ಅವರ ಸ್ನೇಹಿತರು ಹಾಗೂ ಅವರೊಂದಿಗೆ ಒಡನಾಟ ಹೊಂದಿದ್ದ ಎಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ ಎಂದು ಕಣ್ಣೀರು ಹಾಕಿದ್ದಾರೆ.
ಇವರಿಂದ ಪ್ರೇರೇಪಿತರಾಗಿ 1960ರಲ್ಲಿ ಋಷಿಕೇಶ ಪ್ರವಾಸದ ನಂತರ ಬೀಟಲ್ಸ್ ನ ಜಾರ್ಜ್ ಹ್ಯಾರಿಸನ್ ಅವರು ಭಾರತೀಯ ಆಧ್ಯಾತ್ಮಿಕತೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನಂತರ ಇಸ್ಕಾನ್ನೆ ಭಕ್ತವೇದಾಂತ ಎಸ್ಟೇಟ್ನ್ನು ದಾನ ಮಾಡಿದರು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಹೆಚ್ಚಳವಾಗಿದ್ದು, ಪುಣೆಯಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ. ಇತ್ತ ಕೇರಳದಲ್ಲಿ 12 ಜನಕ್ಕೆ ತಗುಲಿದ್ದ ಕೊರೊನಾ ಒಂದೇ ದಿನದಲ್ಲಿ 19ಕ್ಕೆ ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, 7ನೇ ತರಗತಿ ವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅಲ್ಲದೆ ಮಾ.31ರ ವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಸಹ ನಿರ್ಧಾರ ಕೈಗೊಳ್ಳಲಾಗಿದೆ.