ಬೆಂಗಳೂರು: ಮಂತ್ರಿ ಸ್ಥಾನ ಹಂಚಿಕೆಯಾದ ದಿನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರ ನಡುವಿನ `ಸೇವೆ’ ಸಮರ ದಿನೇ ದಿನೇ ಹೆಚ್ಚುತ್ತಿದ್ದು ಇಂದು ಮಂದುವರಿದಿದೆ.
ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರ. ನಾನು ಹೇಳಿದ ಸೇವೆಯನ್ನು ಅವರು ಯಾವ ಸೇವೆ ಅಂದುಕೊಂಡರೋ ಗೊತ್ತಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುವ ಮೂಲಕ ಮತ್ತೊಮ್ಮೆ ಜಯಮಾಲಾರನ್ನು ಕೆಣಕಿದ್ದಾರೆ.
ಜಯಮಾಲಾರವರ ಸೇವೆಯನ್ನು ಮೆಚ್ಚಿ ಕಾಂಗ್ರೆಸ್ ಮುಖಂಡರು ಸಚಿವ ಸ್ಥಾನ ನೀಡಿದ್ದಾರೆ. ಸಚಿವ ಸ್ಥಾನ ಸಿಕ್ಕಿದ್ದರ ಬಗ್ಗೆ ನನಗೇನೂ ಹೊಟ್ಟೆಕಿಚ್ಚು ಇಲ್ಲ. ಉತ್ತರ ಕರ್ನಾಟಕದ ಕಡೆ ಉರುಳು ಸೇವೆ, ದೇವರ ಸೇವೆ ಹಾಗೂ ಅಭಿಷೇಕ ಸೇವೆ ಎಲ್ಲವೂ ಇದೆ. ಈ ಅರ್ಥದಲ್ಲಿ ನಾನು ಸೇವೆ ಎಂದು ಪದ ಬಳಕೆ ಮಾಡಿದ್ದೆ, ನಮ್ಮಲ್ಲಿ `ಸೇವೆ’ ಎಂದರೆ `ಕೆಲಸ’ ಎಂಬರ್ಥ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಏನಿದು ಟಾಂಗ್ ರಾಜಕೀಯ?
ಜಯಮಾಲಾ ಅವರಿಗೆ ಸಚಿವ ಸ್ಥಾನ ಸಿಕ್ಕ ದಿನದಿಂದಲೂ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಎದ್ದಿತ್ತು. ಜೂನ್ 9 ರಂದು ಮಾಧ್ಯಮದೊಂದಿಗೆ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಪಕ್ಷದ ಸಂಘಟನೆಗಾಗಿ ಶ್ರಮಿಸಿದ್ದೇನೆ. ಆದರೂ ನನಗೆ ಸಚಿವ ಸ್ಥಾನ ಕೈತಪ್ಪಿತು. ಪಕ್ಷದಲ್ಲಿ ಯಾರು ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಜಯಮಾಲಾ ಅವರ `ಸೇವೆ’ಯನ್ನು ಕಾಂಗ್ರೆಸ್ ಮುಖಂಡರು ಮೆಚ್ಚಿದ್ದು, ಅದೇ ಕಾರಣಕ್ಕೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಚಿವೆ ಜಯಮಾಲಾ, ಜಗತ್ತಿನಲ್ಲಿ ಎಲ್ಲದಕ್ಕೂ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಯಾವುದೇ ಔಷಧಿ ಇಲ್ಲವೆಂದು ತಿರುಗೇಟು ನೀಡಿದ್ದರು.