ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಜೆಟ್ಗೆ ಶಾಸಕಾಂಗ ಪಕ್ಷದ ಸದಸ್ಯರಿಂದಲೇ ಭಾರೀ ಟೀಕೆ ಹಾಗೂ ಅಸಮಾಧಾನ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಅನ್ನು ಗುರುವಾರ ಕುಮಾರಸ್ವಾಮಿ ಅವರು ಮಂಡಿಸಿದ್ದರು. ಆದರೆ ಈಗ ಇದು ದೋಸ್ತಿ ಸರ್ಕಾರದಲ್ಲಿ ಭಾರೀ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭೆ ಕಲಾಪ ಮುಂದೂಡಿದ ಬಳಿಕವೂ ಸದನದೊಳಗೆ ಮುಖ್ಯಮಂತ್ರಿಯನ್ನು ಸುತ್ತುವರಿದ ಕೈ ಹಾಗೂ ಜೆಡಿಎಸ್ ಶಾಸಕರು ತಮ್ಮ ಬೇಡಿಕೆಗಳನ್ನು ಮಂಡಿಸಿದರು. ತಮ್ಮ ಕ್ಷೇತ್ರಗಳಿಗೆ ಏನು ಕೊಟ್ಟಿಲ್ಲ. ಪೂರಕ ಬಜೆಟ್ನಲ್ಲಿ ಅವಕಾಶ ಕಲ್ಪಿಸಿ ಎಂದು ಪಟ್ಟು ಹಿಡಿದರು.
ಹಾಸನ-ರಾಮನಗರ ಅಣ್ತಮ್ಮ ಬಜೆಟ್ ಎಂಬ ಹಣೆಪಟ್ಟಿ ಮೈತ್ರಿ ಸರ್ಕಾರಕ್ಕೆ ಒಳ್ಳೆಯದಲ್ಲ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳ ನಿರ್ಲಕ್ಷ್ಯ ಜೆಡಿಎಸ್ ಬೆಳವಣಿಗೆಗೆ ಪೂರಕವಾಗುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಸುಧಾಕರ್, ಸಚಿವ ಶಿವಾನಂದ ಪಾಟೀಲ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಾಪದ ನಂತರ ಶಾಸಕರನ್ನು ಸಮಾಧಾನ ಪಡಿಸಲು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು 20 ನಿಮಿಷಗಳ ಕಾಲ ಹರಸಾಹಸ ಪಟ್ಟರು. ಆದರೂ ಶಾಸಕರು ಕುಮಾರಸ್ವಾಮಿ ಅವರ ಸ್ಪಷ್ಟನೆಗೆ ಬಗ್ಗದೇ ಪೂರಕ ಬಜೆಟ್ನಲ್ಲಿ ತಮ್ಮ ಕ್ಷೇತ್ರಗಳಿಗೆ ವಿಶೇಷ ಪ್ರಾಮುಖ್ಯತೆ ನೀಡುವಂತೆ ಒತ್ತಾಯಿಸಿದರು.