ಚಿಕ್ಕಮಗಳೂರು : ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆಗೆ ಶರಣಾದಾಗ ಇಡೀ ರಾಜ್ಯ ಕಂಬನಿ ಮಿಡಿದಿತ್ತು. ವಿಷಯ ಕೇಳಿ ಬೆಳೆಗಾರರಿಗೆ ಹಾಗೂ ಉದ್ಯಮಕ್ಕೆ ಸಿಡಿಲು ಬಡಿದಂತಾಗಿತ್ತು. ದೇಶದ ಕಾಫಿಗೆ ಅಂತರಾಷ್ಟ್ರಿಯ ಮಟ್ಟದ ಖ್ಯಾತಿ ತಂದಿದ್ದು ಸಿದ್ಧಾರ್ಥ್ ಹೆಗ್ಡೆ. ಲಕ್ಷಾಂತರ ಜನರಿಗೆ ಅನ್ನದಾತರಾಗಿದ್ದ ಅವರ ಅಗಲಿಕೆಯನ್ನ ಇಂದಿಗೂ ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗ್ತಿಲ್ಲ. ಕಾಫಿಯ ದರ ಏರಿಳಿತ ಕಂಡಾಗ ಸಿದ್ಧಾರ್ಥ್ ಹೆಗ್ಡೆ ಇರಬೇಕಿತ್ತು ಅನ್ನೋರು ಇಂದಿಗೂ ಸಾವಿರಾರು ಜನ. ವಿಧಿಲಿಖಿತ ಅವರಿಂದು ನಮ್ಮೊಂದಿಗಿಲ್ಲ. ಆದ್ರೆ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ರು ಮಾನಸಿಕವಾಗಿ ಪ್ರತಿಯೊಬ್ಬ ಕೂಲಿ ಕಾರ್ಮಿಕನ ಹೃದಯದಲ್ಲೂ ಚಿರಸ್ಥಾಯಿ. ಹಾಗಾಗಿಯೇ ಅವರ ನೆನಪಿಗಾಗಿ ವಿಶ್ವದ ಮೊದಲ ಜಿ.ವಿ.ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಕಾಫಿನಾಡಲ್ಲಿ ಅನಾವರಣಗೊಂಡಿದೆ.
ಬದುಕಿದ್ದಾಗಲೇ ಸತ್ತಿರೋ ಕೊಟ್ಯಾಂತರ ಜನರ ಮಧ್ಯೆ, ಸತ್ತ ಮೇಲೂ ಬದುಕಿರೋರಲ್ಲಿ ಸಿದ್ಧಾರ್ಥ್ ಹೆಗ್ಡೆ ಕೂಡ ಒಬ್ರು. ಅವರ ಸರಳತೆ ಬೆರಗಾಗದವರೇ ಇಲ್ಲ. ಕಾಫಿಯ ಬಗ್ಗೆ ಅವರಿಗಿದ್ದ ಜ್ಞಾನ. ಕೊಡುತ್ತಿದ್ದ ಸಲಹೆಗಳನ್ನ ಕಾಫಿನಾಡಿನ ಜನ ಇಂದಿಗೂ ಮರೆತಿಲ್ಲ. ಹಾಗಾಗಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಸಿಗೋಡು ಹಾಗೂ ದೇವಗೋಡು ಗ್ರಾಮಸ್ಥರು ತಮ್ಮೂರಿನ ಸರ್ಕಲ್ ಸಿದ್ಧಾರ್ಥ್ ಹೆಗ್ಡೆ ಸರ್ಕಲ್ ಎಂದು ನಾಮಫಲಕ ನೆಟ್ಟು ನಾಮಕರಣ ಮಾಡಿಕೊಂಡಿದ್ದಾರೆ. ಸಿದ್ಧಾರ್ಥ್ ಹೆಗ್ಡೆ ಎಂದೇ ನಾಮಕರಣಗೊಂಡ ದೇಶದ ಮೊದಲ ವೃತ್ತ ಇದು. ಅವರಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉಪಯೋಗವಾಗಿದೆ. ಅವರ ಮೇಲಿನ ಅಭಿಮಾನ, ಗೌರವಕ್ಕೆ ಕೊನೆ ಇಲ್ಲ. ಹಾಗಾಗಿ ಅವರ ಹೆಸರು ಶಾಶ್ವತವಾಗಿರಲೆಂದು ನಮ್ಮೂರಿನ ಸರ್ಕಲ್ಗೆ ಅವರ ಹೆಸರಿಟ್ಟಿದ್ದೇವೆ ಎಂದು ಕಾಫಿ ಬೆಳೆಗಾರರು ಹೇಳುತ್ತಾ ಭಾವುಕರಾಗುತ್ತಾರೆ. ಇದನ್ನೂ ಓದಿ: ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ
ಪ್ರಿಯದರ್ಶಿನಿ ಎಸ್ಟೇಟ್ ಅಚ್ಚುಮೆಚ್ಚು : ಪ್ರಿಯದರ್ಶಿನಿ ಎಸ್ಟೇಟ್ ಅಂದ್ರೆ ಸಿದ್ಧಾರ್ಥ್ ಹೆಗ್ಡೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಯಾಕಂದ್ರೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೇತನಹಳ್ಳಿಯಲ್ಲಿದ್ದ ಅವರ ಸ್ವಂತ ತೋಟ ಬಿಟ್ಟು ಅವರೇ ಖರೀದಿಸಿದ ಮೊದಲ ತೋಟ ಅಂದ್ರೆ ಬಾಳೆಹೊನ್ನೂರು ಬಳಿಯ ಪ್ರಿಯದರ್ಶಿನಿ ಎಸ್ಟೇಟ್. ಅವರಿಗೆ ಈ ತೋಟದ ಮೇಲೆ ಒಲವು ಜಾಸ್ತಿ. ಇಲ್ಲಿ ತೋಟ ಮಾಡಿದಾಗ ಸ್ಥಳೀಯರ ಜೊತೆ ಸಾಮಾನ್ಯನಂತೆ ಬೆರೆಯುತ್ತಿದ್ದರು. ಸ್ಥಳೀಯ ನೂರಾರು ಜನರಿಗೆ ಕೆಲಸ ಕೊಟ್ಟಿದ್ದರು. ಕೂಲಿ ಜೊತೆ ಕೂಲಿಯಾಗೇ ಮಾತನಾಡುತ್ತಿದ್ದರು. ಸರಳತೆಗೆ ಮತ್ತೊಂದು ಹೆಸರೇ ಸಿದ್ಧಾರ್ಥ್ ಹೆಗ್ಡೆ. ಅವರಿಂದ ನಮಗೆ ಸಾಕಷ್ಟು ಸಹಾಯವಾಗಿದೆ. ಹಾಗಾಗಿ, ಅವರ ಋಣ ತೀರಿಸಲು ನಮ್ಮೂರಿನ ಸರ್ಕಲ್ಗೆ ಅವರ ಹೆಸರಿಟ್ಟಿದ್ದೇವೆ ಅನ್ನೋದು ಸ್ಥಳೀಯರ ಮಾತು. ಇದನ್ನೂ ಓದಿ: ಸಿದ್ಧಾರ್ಥ್ ‘ಕಾಫಿರಾಜ’ನಾದ ಕಥೆಯನ್ನು ಓದಿ
ಸಹ್ಯಾದ್ರಿ ಬೆಳೆಗಾರರ ಸಂಘದ ಅಧ್ಯಕ್ಷ ರಂಗನಾಥ್ ನಾಮಫಲಕವನ್ನ ಅನಾವರಣಗೊಳಿಸಿದರು. ಉಪಾಧ್ಯಕ್ಷ ಕೆ.ಟಿ.ವೆಂಕಟೇಶ್ ಸ್ವಾಗತಿಸಿದರು. ಸಂಘದ ಕಾರ್ಯಕಾರಿಣಿ ನಿರ್ದೇಶಕ ಸಂತೋಷ್ ಅರೆನೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸೀಗೋಡು-ದೇವಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಹಾಗೂ ಕಾಫಿ ಬೆಳೆಗಾರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ