– ಸ್ಥಳೀಯರ ಆರೋಗ್ಯದಲ್ಲಿ ಏರುಪೇರು
ಮಡಿಕೇರಿ: ನೂತನವಾಗಿ ನಿರ್ಮಾಣಗೊಂಡಿದ್ದ ಸಿಎನ್ಜಿ ಘಟಕದಲ್ಲಿ ಅನಿಲ ಸೋರಿಕೆಯಾದ (CNG Gas leak) ಘಟನೆ ಕೊಡಗಿನ (Kodagu) ಕುಶಾಲನಗರ (Kushalnagar) ತಾಲೂಕಿನ ಕೂಡ್ಲೂರು ಬಡಾವಣೆಯಲ್ಲಿ ನಡೆದಿದೆ.
ಅನಿಲ ಸೋರಿಕೆಯಿಂದ ಮಂಗಳವಾರ ಸಂಜೆ ಘಟಕದ ಸುತ್ತಮುತ್ತ ಭಾರೀ ದುವಾರ್ಸನೆ ಬಂದಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಉಸಿರಾಟ ಸಮಸ್ಯೆಯಾಗಿ, ಆರೋಗ್ಯದಲ್ಲಿ ಏರುಪೇರಾಗಿದೆ. ಮಕ್ಕಳಲ್ಲಿ ವಾಂತಿ, ವಾಕರಿಗೆ ಹಾಗೂ ಅಸ್ವಸ್ಥತೆ ಉಂಟಾಗಿದೆ.
ಈ ಘಟನೆಯಿಂದ ಆತಂಕಗೊಂಡ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರ ನೇತೃತ್ವದಲ್ಲಿ ಗ್ಯಾಸ್ ಬಂಕ್ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಗ್ಯಾಸ್ ಘಟಕದವರ ನಿರ್ಲಕ್ಷ್ಯತನದಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಜನವಸತಿ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಈ ಘಟಕದಿಂದ ಮುಂದಿನ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಜೀವಹಾನಿ ಉಂಟಾದರೆ ಯಾರು ಹೊಣೆ? ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿ, ಹಲವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಘಟಕದ ಸಿಬ್ಬಂದಿಯನ್ನು ವಿಚಾರಿಸಿದಾಗ ಲೀಕೇಜ್ ಟೆಸ್ಟಿಂಗ್ ಸಂದರ್ಭದಲ್ಲಿ ಈ ರೀತಿಯಾಗಿದೆ ಎಂದು ತಿಳಿಸಿದ್ದಾರೆ. ಇದರ ಬಗ್ಗೆ ಮುಂಚಿತವಾಗಿಯೇ ಯಾವುದೇ ಜಾಗೃತಿ ಮೂಡಿಸದೆ ಟೆಸ್ಟಿಂಗ್ ನಡೆಸಿದ ಪರಿಣಾಮ ಈ ಅವಾಂತರ ಉಂಟಾಗಿದೆ ಎಂದಿದ್ದಾರೆ.