ನವದೆಹಲಿ: ಹೈಕೋರ್ಟ್ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧದ ಪ್ರಾಸಿಕ್ಯೂಷನ್ ಆದೇಶವನ್ನು ಎತ್ತಿ ಹಿಡಿದಿದೆ. ಹೀಗಿರುವಾಗ ಅವರು ಸಿಎಂ ಸ್ಥಾನದಲ್ಲಿದ್ದರೆ ತನಿಖೆ ಪಕ್ಷಪಾತವಾಗಿ ನಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಯಾಗಲಿ, ಆದರೆ ಅವರು ರಾಜೀನಾಮೆ ನೀಡಲಿ. ಇಲ್ಲದಿದ್ದರೆ ಅವರು ಲೋಕಾಯುಕ್ತದ ಮೇಲೆ ಒತ್ತಡ ಹಾಕಲಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಡಾ ಹಗರಣದಲ್ಲಿ (MUDA scam) ಸಿದ್ದರಾಮಯ್ಯ ಅವರು ಅಪಾರಾಧಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಯಾವ ಪ್ರಕರಣವನ್ನು ಪ್ರಾಸಿಕ್ಯೂಷನ್ ಮಾಡಬೇಕು ಎಂದಿದ್ದರೋ, ಅದನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂದಿದ್ದಾರೆ.
ದಲಿತರ ಜಮೀನನ್ನು ಖರೀದಿ ಮಾಡಿದ್ದು ಸಿದ್ದರಾಮಯ್ಯ ಅವರು ಮಾಡಿದ ಮೊದಲ ತಪ್ಪು. 1991ರ ನಂತರ ಸಿದ್ದರಾಮಯ್ಯ ಸಾಂವಿಧಾನಿಕ ಹುದ್ದೆಯಲ್ಲಿದ್ದರು. ಈ ಅವಧಿಯಲ್ಲಿ ಹಳ್ಳಿಯಲ್ಲಿ ಜಮೀನು ಕೊಟ್ಟು, ಮೈಸೂರಿನ ಪ್ರತಿಷ್ಠಿತ ಏರಿಯಾದಲ್ಲಿ ಸೈಟ್ ಪಡೆದಿದ್ದಾರೆ. ಈಗ ಹೈಕೋರ್ಟ್ ಕೂಡಾ ತನಿಖೆ ಆಗಬೇಕು ಎಂದಿದೆ. ಈ ಹಿಂದೆ ರಾಜ್ಯಪಾಲರ ವಿರುದ್ಧ ಹೇಗೆಲ್ಲ ಮಾತನಾಡಿದ್ದರು. ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಬಂದ ಗತಿ ರಾಜ್ಯಪಾಲರಿಗೆ ಬರುತ್ತೆ ಎಂದಿದ್ದರು. ಆದರೂ ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ ಲೋಕಾಯುಕ್ತವನ್ನು ಮುಚ್ಚಿದ್ದರು. ಈಗ ಅದರಿಂದಲೇ ರಕ್ಷಣೆ ಪಡೆಯುತ್ತಾರೆ. ತಮ್ಮ ಮೇಲಿನ ಕೇಸ್ ಮುಚ್ಚಲು ಲೋಕಾಯುಕ್ತವನ್ನೇ ಮುಚ್ಚಿದ್ದರು ಎಂದು ಅವರು ಆರೊಪಿಸಿದ್ದಾರೆ.