– ವೇದಿಕೆಯಲ್ಲಿ ಇದು ನಮ್ಮ ಸರ್ಕಾರದ ಯೋಜನೆ ಎಂದ ಸಂಸದ ಮುನಿಸ್ವಾಮಿ
ಕೋಲಾರ : ಜಿಲ್ಲೆಯ ಮಹತ್ವಾಕಾಂಕ್ಷಿ ಯರಗೋಳ ಕುಡಿಯುವ ನೀರಿನ ಯೋಜನೆಯನ್ನು (Yargol Drinking Water Project) ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಲೋಕಾರ್ಪಣೆ ಮಾಡಿದ್ದಾರೆ. ಕಾಮಗಾರಿ ಆರಂಭವಾಗಿ 17 ವರ್ಷಗಳ ನಂತರ ಯೋಜನೆ ಲೋಕಾರ್ಪಣೆಗೊಂಡಿದ್ದು, ಮೂರು ತಾಲೂಕಿನ ಜನರಿಗೆ ಹಾಗೂ 45 ಗ್ರಾಮಗಳ ದಾಹ ನೀಗಿಸಲಿದೆ ಎಂಬ ಸಂತಸ ಜಿಲ್ಲೆಯಲ್ಲಿ ಮನೆ ಮೂಡಿದೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಮಹಿಳೆಯರು ಕಲಶ ಹೊತ್ತು ಪೂರ್ಣ ಕುಂಭ ಸ್ವಾಗತ ಕೋರಿದರು. ಜಿಲ್ಲೆಯ ಬಂಗಾರಪೇಟೆ, ಮಾಲೂರು, ಹಾಗೂ ಕೋಲಾರ ತಾಲೂಕು ಸೇರಿದಂತೆ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಜೊತೆಗೆ ಸುಮಾರು 2219 ಕೋಟಿ ರೂ.ಯಷ್ಟು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಲಸ ನಡೆಯುವುದಿಲ್ಲ ಎಂದು ಹೇಳುವ ವಿರೋಧಿಗಳಿಗೆ ಕೇಳಲಿಕ್ಕೆ ಬಯಸುವೆ. ಕಣ್ಣು ಮುಚ್ಚಿಕೊಂಡು ರಾಜಕೀಯ ಕಾರಣಕ್ಕೋಸ್ಕರ ಮಾತನಾಡಲು ಹೋಗಬೇಡಿ. ಕೋಲಾರ ಜಿಲ್ಲೆಯೊಂದರಲ್ಲೇ 2 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇದು ಸಣ್ಣ ಅನುದಾನನಾ ಗ್ಯಾರಂಟಿ ಕೊಟ್ಟ ಮೇಲೆ ಅಭಿವೃದ್ದಿ ಆಗಿಲ್ವ ಎಂದು ಪ್ರಶ್ನೆ ಮಾಡಿದರು.
ಎತ್ತಿನ ಹೊಳೆ ಯೋಜನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎತ್ತಿನ ಹೊಳೆ ಯೋಜನೆ ಜಾರಿ ಆಗುವುದಿಲ್ಲ ಎಂದಿದ್ದರು. ಆದರೆ ಅವರಿಗೆಲ್ಲ ಈಗ ಉತ್ತರ ಸಿಕ್ಕಿದೆ ಎಂದು ಹೇಳಿದರು. ಇದನ್ನೂ ಓದಿ: ಐಸಿಸ್ ಪರ ಕೆಲಸ – ಅಲಿಗಢ ಮುಸ್ಲಿಂ ವಿವಿಯ 6 ವಿದ್ಯಾರ್ಥಿಗಳು ಅರೆಸ್ಟ್
ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ಕೋಲಾರ (Kolara) ಜಿಲ್ಲೆಗೆ ಆಗಮಿಸಿದ್ದರಿಂದ ಅದ್ದೂರಿಯಾಗಿಯೇ ಸಿದ್ದತೆಗಳನ್ನು ಮಾಡಲಾಗಿತ್ತು. ಕಳೆದ ಹತ್ತು ಹದಿನೈದು ದಿನಗಳಿಂದಲೇ ಬೇಕಾದ ಸಿದ್ದತೆಗಳನ್ನು ಮಾಡಲಾಗಿತ್ತು. ಯರಗೋಳ ಡ್ಯಾಂ ಬಳಿಯೇ ಬೃಹತ್ ವೇದಿಕೆ ಹಾಕಲಾಗಿತ್ತು. ಸಿದ್ದರಾಮಯ್ಯ ಡ್ಯಾಂ ಲೋಕಾರ್ಪಣೆ ಮಾಡಿದ ನಂತರ ಬಾಗಿನ ಅರ್ಪಿಸಿದರು.
ಸಿದ್ದರಾಮಯ್ಯನವರಿಗೆ ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಬೈರತಿ ಸುರೇಶ್, ರಾಮಲಿಂಗಾರೆಡ್ಡಿ, ಎಂಸಿ ಸುಧಾಕರ್, ಕೃಷ್ಣಬೈರೇಗೌಡ, ಕೆ.ಜೆ.ಜಾರ್ಜ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಸಂಸದರು ಉಪಸ್ಥಿತರಿದ್ದರು.
ವೇದಿಕೆಯಲ್ಲೇ ಕಿಡಿ:
ಈ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸದ ಮುನಿಸ್ವಾಮಿ (Muniswamy) ಯರಗೋಳ ಯೋಜನೆ ಬಿಜೆಪಿ, ಜೆಡಿಎಸ್ (BJP-JDS) ಸಮಿಶ್ರ ಸರ್ಕಾರದಲ್ಲಿ ಅನುಷ್ಠಾನಕ್ಕೆ ಬಂದ ಯೋಜನೆ. ಈ ಯೋಜನೆಯ ಹಿಂದೆ ಹಲವರ ಶ್ರಮ ಇದೆ ಇದೆಲ್ಲವನ್ನು ಮರೆ ಮಾಚಿ ನಮ್ಮದೇ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೆ ಎರಡು ಸಾವಿರ ಕೋಟಿ ರೂ. ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ಕೂಡಾ ಕಳೆದ ನಮ್ಮ ಸರ್ಕಾರದಲ್ಲಿ ಮಾಡಲಾಗಿರುವ ಯೋಜನೆಗಳು. ಇವರ ಸರ್ಕಾರದಿಂದ ಬಿಡಿಗಾಸು ಬಂದಿಲ್ಲ ಎಂದು ತಿರುಗೇಟು ನೀಡಿದರು.