ಬೆಂಗಳೂರು: ವಿಶ್ವನಾಥ್ಗೆ ಆಗ ನನ್ನ ಬಗ್ಗೆ ರೋಮಾಂಚನ ಏಕಾಯ್ತು? ಈಗ ಏಕೆ ರೋಮಾಂಚನ ಆಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.
ಕೆಪಿಸಿಸಿ ಸಮನ್ವಯ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾದಾಗ ನನ್ನ ಬಗ್ಗೆ ರೋಮಾಂಚನ ಏಕಾಯ್ತು.? ಈಗ ಏಕೆ ರೋಮಾಂಚನ ಆಗ್ತಿಲ್ಲ. ಈ ಪ್ರಶ್ನೆಗೆ ವಿಶ್ವನಾಥ್ ಅವರನ್ನೇ ಕೇಳಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಯಾರೂ ಬಿಡುವುದಿಲ್ಲ. ನನಗೆ ತಿಳಿದಮಟ್ಟಿಗೆ ವಿಶ್ವನಾಥ್ ಅವರು ಬಿಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇನೆ ಎಂದು ವೇಣುಗೋಪಾಲ್ ಹತ್ತಿರ ವಿಶ್ವನಾಥ್ ಹೇಳಿದ್ದಾರೆ. ನನ್ನ ವಿಶ್ವನಾಥ್ ಮಧ್ಯೆ ಯಾವುದೇ ಗೊಂದಲ ಇಲ್ಲ ಎಂದು ಅವರು ತಿಳಿಸಿದರು.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಏಕೆ ಪಕ್ಷ ಬಿಟ್ಟಿದ್ದಾರೆ ಎನ್ನೋದು ನಿಮಗೆ ಗೊತ್ತಿದೆ. ಎಸ್.ಎಂ ಕೃಷ್ಣ ಪಕ್ಷ ಬಿಟ್ಟಿದ್ದು ವೈಯುಕ್ತಿಕ. ಯಾರು ಕಾಂಗ್ರೆಸ್ ಪಕ್ಷವನ್ನು ಬಿಡಲ್ಲ ಎಂದು ಅವರು ಹೇಳಿದರು.
ವಿಶ್ವನಾಥ್ ಹೇಳಿದ್ದು ಏನು?
ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಮಂಗಳವಾರ ಹಿರಿಯ ನಾಯಕರಾಗಿರುವ ವಿಶ್ವನಾಥ್ ಅವರು ರಾಜ್ಯ ಕಾಂಗ್ರೆಸ್ನ ನೂತನ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಗೆ ಕರೆ ತಂದು ಮುಖ್ಯಮಂತ್ರಿ ಮಾಡಿ ಅವರನ್ನು `ಹೀರೊ’ ಎಂದು ಹೇಳಿದ್ದ ಥ್ರಿಲ್ ಈಗ ಉಳಿದಿಲ್ಲ ಎಂದು ಹೇಳಿದ್ದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ನಾನು ರೋಮಂಚನಗೊಂಡಿದ್ದೆ, ಅಷ್ಟೇ ಅಲ್ಲದೇ ಆನಂದ ಭಾಷ್ಪವೂ ಬಂದಿತ್ತು. ಆದರೆ ಈಗ ನನಗೆ ಅಪಮಾನ ಮಾಡಿದ್ದಾರೆ, ಪಕ್ಷಕ್ಕೆ ಕಷ್ಟಪಟ್ಟು ದುಡಿದವರನ್ನು ನಿರ್ಲಕ್ಷಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು `ಹೀರೋ’ ಎನ್ನುವ ಥ್ರಿಲ್ ಈಗ ಹೋಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.