ಬೆಂಗಳೂರು: ಕರ್ನಾಟಕದಲ್ಲಿ ನಿರೀಕ್ಷೆಗಿಂತಲೂ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ (Congress) ಪಕ್ಷಕ್ಕೆ ಇದೀಗ ಮುಖ್ಯಮಂತ್ರಿ (Karnataka CM) ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ.
ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಸಿಎಂ ಹುದ್ದೆಗೆ ನಡೆಯುತ್ತಿರುವ ತೀವ್ರ ಪೈಪೋಟಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಭಾನುವಾರ ಸಂಜೆ ನಡೆದ ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆಶಿ (DK Shivakumar) ಸಿಎಂ ಹುದ್ದೆಗೆ ಪಟ್ಟು ಹಿಡಿದ ಕಾರಣ, ನೂತನ ನಾಯಕನ ಆಯ್ಕೆಯನ್ನ ಹೈಕಮಾಂಡ್ ವಿವೇಚನೆಗೆ ಬಿಡಲಾಗಿದೆ.
ನಂತರ ತಡರಾತ್ರಿಯವರೆಗೂ ಶಾಸಕರ ಅಭಿಪ್ರಾಯಗಳನ್ನ ಒನ್ ಟು ಒನ್ ಸಂಗ್ರಹಿಸಲಾಯ್ತು. ಸದ್ಯ ಹೈಕಮಾಂಡ್ ಅಂಗಳದಲ್ಲಿ ಸಿಎಂ ಆಯ್ಕೆಯ ಚೆಂಡು ಇದೆ. ಭಿನ್ನ, ವಿಭಿನ್ನ ಮಾದರಿಗಳಲ್ಲಿ ಲಾಬಿಗಳು ಮುಂದುವರೆದಿವೆ. ಯಾರೂ ಊಹಿಸಲಾಗದ ರೀತಿಯಲ್ಲಿ ಹೊಸ ಹೊಸ ಆಟಗಳು ಶುರುವಾಗಿವೆ.
ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ದೆಹಲಿಗೆ ಹಾರಿದ್ದಾರೆ. ಇತ್ತ, ಕೊನೆಯ ಕ್ಷಣದಲ್ಲಿ ಡಿ.ಕೆ ಶಿವಕುಮಾರ್ ಅನಾರೋಗ್ಯ ಕಾರಣ ನೀಡಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಜೊತೆಗೆ ಭಾವನಾತ್ಮಕ ದಾಳವನ್ನು ಉರುಳಿಸಿದ್ದಾರೆ. ಇದನ್ನೂ ಓದಿ: ನಮ್ಮವರಿಂದಲೇ ಸೋಲು, ನನ್ನ ಜಾತಿಯನ್ನೇ ಸುಳ್ಳು ಮಾಡಿದ್ರು: ಅಳಲು ತೋಡಿಕೊಂಡ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ
ದೆಹಲಿ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ನನ್ನ ಜೊತೆ ಯಾವ ಶಾಸಕರೂ ಇಲ್ಲ. ನನಗೆ ಯಾರ ಬೆಂಬಲವೂ ಬೇಡ. ನಾನು ವ್ಯಕ್ತಿ ಪೂಜೆ ಮಾಡಲ್ಲ. ಪಕ್ಷ ಪೂಜೆ ಮಾಡ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿಯೇ ಸಿಎಂ ಆಗಬೇಕು- ಓಲಾ, ಊಬರ್ ಚಾಲಕರ ಸಂಘಟನೆ ಆಗ್ರಹ
ನನ್ನನ್ನು ಬಂಡೆ ಎಂದು ಕರೆದಿದ್ದೀರಾ ಚಪ್ಪಡಿಯನ್ನಾದ್ರೂ ಮಾಡಿಕೊಳ್ಳಿ, ಮರಳುಗಂಬವನ್ನಾದ್ರೂ ಮಾಡಿಕೊಳ್ಳಿ ನನ್ನಲ್ಲಿರೋ ಎಲ್ಲಾ ತಂತ್ರಗಾರಿಕೆ ಬಳಸಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ನನಗೆ ಅಷ್ಟೇ ಸಾಕು ಎಂದಿದ್ದಾರೆ. ನಾನು ಬ್ಲ್ಯಾಕ್ ಮೇಲ್ ಮಾಡಲ್ಲ. ಅಂತಹ ರಾಜಕಾರಣಿ ನಾನಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಯಾರಾಗ್ತಾರೆ ಸಿಎಂ ಎಂಬ ಕುತೂಹಲ ಇನ್ನಷ್ಟು ತೀವ್ರಗೊಂಡಿದೆ. ಆದ್ರೆ, ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ.. ನಾವೆಲ್ಲಾ ಒಂದಾಗಿಯೇ ಇದ್ದೇವೆ. ಮುಂದೆಯೂ ಒಂದಾಗಿಯೇ ಇರುತ್ತೇವೆ ಎಂದು ಶಾಸಕ ಎಂ.ಬಿ ಪಾಟೀಲ್ ಪ್ರತಿಪಾದಿಸಿದ್ದಾರೆ.