ಡೆಹ್ರಾಡೂನ್: ಉತ್ತರಾಖಂಡದ (Uttarakhand) ರುದ್ರಪ್ರಯಾಗ, (Rudraprayag) ಚಮೋಲಿ, (Chamoli) ಜಿಲ್ಲೆಗಳಲ್ಲಿ ಭಾರೀ ಮೇಘಸ್ಫೋಟ (Cloudburst) ಸಂಭವಿಸಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೇಘಸ್ಫೋಟದಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ದೇವಲ್ನ ಮೊಪಾಟಾ ಪ್ರದೇಶದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. ಇನ್ನೂ 15ಕ್ಕೂ ಹೆಚ್ಚು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮದಲ್ಲಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ಹನುಮಾನ್ ದೇವಾಲಯ ಮುಳುಗಡೆಯಾಗಿದೆ.ಇದನ್ನೂ ಓದಿ: ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!
ಶ್ರೀನಗರ ಮತ್ತು ರುದ್ರಪ್ರಯಾಗ ನಡುವಿನ ಬದರಿನಾಥ ಹೆದ್ದಾರಿ ಮುಳುಗಡೆಯಾದ ಹಿನ್ನೆಲೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಯಾತ್ರಿಕರನ್ನು ಪರ್ಯಾಯ ಮಾರ್ಗಗಳ ಮೂಲಕ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇನ್ನೂ ಕೇದಾರನಾಥ ಕಣಿವೆಯ ಲಾವಾರಾ ಗ್ರಾಮದಲ್ಲಿಯೂ ಭೀಕರ ಪ್ರವಾಹ ಉಂಟಾಗಿದೆ. ಪರಿಣಾಮ ರಸ್ತೆಯ ಸೇತುವೆಯೊಂದು ಕೊಚ್ಚಿಹೋಗಿದ್ದು, ಚೆನಾಗಡ್ನಲ್ಲಿಯೂ ಗಂಭೀರ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯ ಹಿನ್ನೆಲೆ ರುದ್ರಪ್ರಯಾಗ, ಬಾಗೇಶ್ವರ, ಚಮೋಲಿ, ಹರಿದ್ವಾರ ಮತ್ತು ಪಿಥೋರಗಢ ಜಿಲ್ಲೆಗಳಾದ್ಯಂತ ಇಂದು (ಆ.29) ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಸಾಮೂಹಿಕ ಗಣೇಶ ವಿಸರ್ಜನೆಗೆ ಬೆಂಗ್ಳೂರಿನ ಕೆಲವು ಏರಿಯಾಗಳಲ್ಲಿ ಮದ್ಯ ನಿಷೇಧ