ಚಿಕ್ಕಮಗಳೂರು: ಹೃದಯಾಘಾತದಿಂದ (Heart Attack) 9ನೇ ತರಗತಿಯ ಬಾಲಕಿ (School Girl) ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಬಾಲಕಿ ಸಾವನ್ನಪ್ಪುತ್ತಿದ್ದಂತೆ ಆಕೆಯ ಪೋಷಕರು ಕೂಡಲೇ ಆಕೆಯ ಕಣ್ಣುಗಳನ್ನು ದಾನ (Eye Donation) ಮಾಡಲು ಮುಂದಾಗಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ವೈಷ್ಣವಿ (14) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 7:30ರ ಸುಮಾರಿಗೆ ಬಾಲಕಿ ಸಾವನ್ನಪ್ಪಿದ್ದು, ಆಕೆಯ ನೇತ್ರದಾನ ವಿಚಾರವನ್ನು ಸ್ಥಳೀಯರು ಚಿಕ್ಕಮಗಳೂರು (Chikkamagaluru) ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಅಧಿಕಾರಿಗಳು ಬರುತ್ತೇವೆ, ಬರುತ್ತೇವೆ ಎಂದು ಹೇಳಿ ರಾತ್ರಿ 12 ಗಂಟೆಯಾದರೂ ಸ್ಥಳವನ್ನು ತಲುಪಿಲ್ಲ.
ಮಗಳ ಸಾವಿನ ನೋವಿನಲ್ಲೂ ಆಕೆಯ ಪೋಷಕರು ಕಣ್ಣು ಕೊಡಲು ಮುಂದಾಗಿದ್ದಾರೆ. ಅದರೆ ಅಧಿಕಾರಿಗಳು ಬರುತ್ತಿಲ್ಲ ಎಂದು ಸ್ಥಳೀಯರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಇದಾದ ಬಳಿಕ ರಾತ್ರಿ 1 ಗಂಟೆ ಸುಮಾರಿಗೆ ಅಧಿಕಾರಿಗಳು ಹೋಗಿ ಕಣ್ಣನ್ನು ತಂದಿದ್ದಾರೆ. ಇದನ್ನೂ ಓದಿ: ಗುಜರಾತ್ನಲ್ಲಿ ತೂಗು ಸೇತುವೆ ಕುಸಿತ – ಸಾವಿನ ಸಂಖ್ಯೆ 35ಕ್ಕೇರಿಕೆ, ನೂರಾರು ಮಂದಿ ನೀರುಪಾಲು
ಮೃತ ವೈಷ್ಣವಿ ಪೋಷಕರು ಮಗಳ ಸಾವಿನ ನೋವಿನಲ್ಲೂ ಕಣ್ಣುಗಳನ್ನು ದಾನ ಮಾಡಿ, ಮತ್ತೊಬ್ಬರ ದೇಹ ಸೇರಿ ಜಗತ್ತನ್ನು ನೋಡಲು ಕಾರಣಕರ್ತರಾಗಿ, ಸಾರ್ಥಕತೆ ಮೆರೆದಿದ್ದಾರೆ. ಮೃತ ಬಾಲಕಿಯ ಕುಟುಂಬದವರು ಮೂಲತಃ ಉತ್ತರ ಭಾರತದವರಾಗಿದ್ದು, ಆಕೆಯ ಪೋಷಕರು ಮೂಡಿಗೆಯಲ್ಲಿ ಬದುಕು ಕಟ್ಟಿಕೊಂಡಿದ್ದರು. ಬಾಲಕಿಯ ಮೃತದೇಹವನ್ನು ತಮ್ಮ ಊರಿಗೆ ಕೊಂಡೊಯ್ದಿದ್ದಾರೆ. ಇದನ್ನೂ ಓದಿ: 50ಕ್ಕೂ ಹೆಚ್ಚು ಜನರನ್ನು ಹೊತ್ತು ಹಳ್ಳದಾಟುತ್ತಿದ್ದಾಗ ಸಿಲುಕಿದ ಲಾರಿ