ಚಿತ್ರದುರ್ಗ: ಶುದ್ಧ ಕುಡಿಯುವ ನೀರಿನ ವಿಷಯದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ ಭಾವನೆ ತಾಳಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇದು ಶಾಶ್ವತ ಬರದನಾಡೆಂಬ ಹಣೆಪಟ್ಟಿಯುಳ್ಳ ಕೋಟೆನಾಡು ಚಿತ್ರದುರ್ಗದ ವ್ಯಥೆ. ಈ ನಗರಕ್ಕೆ ದಾವಣಗೆರೆ ಜಿಲ್ಲೆಯ ಸೂಳೆಕೆರೆಯಿಂದ ಕುಡಿಯುವ ನೀರಿನ ವ್ಯವಸ್ತೆ ಕಲ್ಪಿಸಲಾಗಿದೆ. ಆದ್ರೆ ಕಳೆದ ನಾಲ್ಕು ವರ್ಷದಿಂದ ಮಳೆ ಆಗಿಲ್ಲ. ಹಾಗಾಗಿ ನೀರು ತಳಮಟ್ಟಕ್ಕೆ ತಲುಪಿದೆ. ಈ ಕೆರೆಯ ಕಲುಷಿತ ನೀರನ್ನು ಕುಡಿದು ಜನರು ಬೇಸಿಗೆ ಕಳೆದಿದ್ದಾರೆ.
ಆದರೆ ಈಗ ಈ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಸಾಕಷ್ಟು ನೀರು ಕೆರೆಗೆ ಹರಿದು ಬಂದಿದೆ. ಆದರೂ ಸಹ ಕೋಟೆನಾಡಿನ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ನಗರಸಭೆ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇನ್ನು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಗರಸಭೆಯ ಪೌರಾಯುಕ್ತರು, ಕೆಲವು ದಿನಗಳು ಮಾತ್ರ ನೀರು ಕಲುಷಿತವಾಗಿ ಬಂದಿತ್ತು. ಆದ್ರೆ ಈ ಸಮಸ್ಯೆ ಈಗ ಬಗೆಹರಿದಿದೆ. ಜಿಲ್ಲಾಧಿಕಾರಿಗಳು ಹಾಗು ನಗರಸಭೆಯ ಅಧಿಕಾರಿಗಳು ಸೂಳೆಕೆರೆ ಹಾಗು ಹಿರೇಕಂದವಾಡಿ ಬಳಿ ಇರುವ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದೇವೆ. ನೀರನ್ನು ನಾಗರಿಕರು ನಿರಾತಂಕದಿಂದ ಕುಡಿಯಬಹುದೆಂದು ಪ್ರಯೋಗಾಲಯದಿಂದ ವರದಿ ಬಂದಿದೆ ಅಂತ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಒಟ್ಟಾರೆ ಉತ್ತಮ ಮಳೆಯಾಗಿ ಕೆರೆ ಭರ್ತಿಯಾದರೂ ಸಹ ಕೋಟೆನಾಡಿನ ಜನರಿಗೆ ಕುಡಿಯುವ ನೀರಿನ ಸಂಕಷ್ಟ ತಪ್ಪಿಲ್ಲ. ಅಧಿಕಾರಿಗಳ ಎಡವಟ್ಟಿನಿಂದಾಗಿ ಶುದ್ಧ ಕುಡಿಯು ನೀರು ಸಿಗದೆ ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.