– ಹಣ ವಿತರಿಸದೆ 50 ಸಾವಿರ ಮತ ಬಂದಿವೆ
ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ನಿಂದ ಎಲ್ಲಾ ಅಧಿಕಾರ ಅನುಭವಿಸಿ, ಪಕ್ಷದ್ರೋಹ ಮಾಡಿದರು ಎಂದು ಚಿಕ್ಕಬಳ್ಳಾಪುರ ಉಪ ಚುನಾವಣೆಯ ಕಾಂಗ್ರೆಸ್ನ ಅಪಾರಜಿತ ಅಭ್ಯರ್ಥಿ ಎಂ.ಆಂಜಿನಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಶಾಸಕ ಸುಧಾಕರ್ ಅವರಿಗೆ ಎಸ್.ಎಂ.ಕೃಷ್ಣ ಮೊದಲ ಬಾರಿ ಬಿ ಫಾರ್ಮ್ ಕೊಡಿಸಿದ್ದರು. ಅಂದು ನನಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಒಂದು ವೇಳೆ ಟಿಕೆಟ್ ಸಿಕ್ಕಿದ್ರೆ ನಾನು ಗೆಲ್ಲುತ್ತಿದ್ದೆ. ಆದರೆ ಅಂದು ಎಸ್.ಎಂ.ಕೃಷ್ಣ ಅವರು ನನಗೆ ಟಿಕೆಟ್ ಕೊಡದೆ ಸುಧಾಕರ್ ಅವರಿಗೆ ಟಿಕೆಟ್ ಕೊಡಿಸಿದರು ಎಂದು ದೂರಿದರು.
ಉಪ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರ ಹಾಗೂ ಹಣದ ಪ್ರಭಾವ ಬಳಸಿ ಗೆದ್ದಿದೆ. ಸೋತ ನಾವು ಇನ್ನುಮುಂದೆ ಬೂತ್ ಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ. ಇಂತಹ ರಾಜಕಾರಣ ಪರಿಸ್ಥಿತಿಯಲ್ಲಿ ನನಗೆ 50 ಸಾವಿರ ಮತಗಳು ಬಂದಿರುವುದು ಹೆಮ್ಮೆ ಅನಿಸುತ್ತದೆ. ನಾವು ಉಪ ಚುನಾವಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿರಲಿಲ್ಲ. ಹಣ ವಿತರಿಸದೆ 50 ಸಾವಿರ ಮತಗಳು ಬಂದಿರುವುದು ನಮ್ಮ ಸಾಧನೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.