ಬೆಂಗಳೂರು: 75 ವರ್ಷಗಳಿಂದ ಚಾಮರಾಜಪೇಟೆಯ ಮೈದಾನದಲ್ಲಿ ತಿರಂಗ ಹಾರಿಸಲು ಹಾಗೂ ಗಣೇಶೋತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ನಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ. ಸೂರ್ಯ ಚಂದ್ರರಿರುವ ತನಕ ಪ್ರತಿ ವರ್ಷವೂ ಇಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ ಎಂದು ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಲಹರಿ ವೇಲು ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಹರಿ ವೇಲು, ಈದ್ಗಾ ಮೈದಾನದಲ್ಲಿ ತಿರಂಗ ಹಾರಿಸೋಕೆ ನಾವು ಸತತ ಪ್ರಯತ್ನ ಮಾಡಿದ್ದೇವೆ. ಕೊನೆಗೂ ಶಾಂತಿಯುತವಾಗಿ ಧ್ವಜಾರೋಹಣ ಮಾಡಿದ್ದೇವೆ. ಗಣೇಶೋತ್ಸವ ನಡೆಸಲು ಅರ್ಜಿ ಸಲ್ಲಿಸಿದ್ದೇವೆ. ಈಗಾಗಲೇ ನ್ಯಾಯಾಂಗದಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗ ಹೋರಾಟಕ್ಕೆ ಫಲ ಸಿಕ್ಕಿದ್ದು, ಲಹರಿ ಸಂಸ್ಥೆಯಿಂದ ಗಣೇಶ ಮೂರ್ತಿಯನ್ನು ಪ್ರತಿ ವರ್ಷವೂ ಪ್ರತಿಷ್ಠಾಪನೆ ಮಾಡಲಿದ್ದೇವೆ. 16 ನದಿಗಳ ಪವಿತ್ರ ನೀರನ್ನು ಪ್ರೋಕ್ಷಣೆ ಮಾಡಿ, ಶುದ್ಧೀಕರಿಸಿ ಗಣೇಶ ಪ್ರತಿಷ್ಠಾಪನೆ ಮಾಡಲಿದ್ದೇವೆ ಎಂದು ತಿಳಿಸಿದರು.
ಜಮೀರ್ ಸೇರಿದಂತೆ ಎಲ್ಲರೂ ಹಬ್ಬಕ್ಕೆ ಬಂದು ಆರತಿ ತೆಗೆದುಕೊಂಡು ಹೋಗಬಹುದು. ಎಲ್ಲರಿಗೂ ಮುಕ್ತ ಅವಕಾಶ ಇದೆ. ನಮ್ಮ ಮಧ್ಯೆ ಯಾವುದೇ ಒಡಕು ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಯಾರಿಗೆ ಅನುಮತಿ ಕೊಟ್ಟರೂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದರು. ಇದನ್ನೂ ಓದಿ: ಮೈಸೂರು-ಬೆಂಗ್ಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಿ
ಚಾಮರಾಜಪೇಟೆಯ ಗಣೇಶೋತ್ಸವದಲ್ಲಿ ಸಾರ್ವಕರ್ ಫೋಟೋ ಕೂಡಾ ಇಡುತ್ತೇವೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು. ಅವರ ಫೋಟೋ ಇಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಈ ಸ್ಥಳವನ್ನು ಸೂಕ್ಷ್ಮ ಪ್ರದೇಶ ಎಂದು ಹೇಳುತ್ತಾರೆ. ಆದರೆ ರಂಜಾನ್, ಬಕ್ರೀದ್ ಮಾಡುವಾಗ ಸೂಕ್ಷ್ಮ ಪ್ರದೇಶ ಎನ್ನುವುದಿಲ್ಲ. ಹೀಗಾಗಿ ಗಣೇಶೋತ್ಸವ ಮಾಡುವಾಗ ಯಾಕೆ ಈ ಸೂಕ್ಷ್ಮ ಪ್ರದೇಶದ ವಿಚಾರ? ಪಾದರಾಯನಪುರ ಸೇರಿದಂತೆ ಚಾಮರಾಜಪೇಟೆಯ ಗಲ್ಲಿಯಲ್ಲಿ ಗಣೇಶೋತ್ಸವ ಮೆರವಣಿಗೆಯನ್ನು ನಾವು ಮಾಡುತ್ತೇವೆ. ಈ ಹಿಂದೆ ರಸ್ತೆಯಲ್ಲಿ ಇಟ್ಟಾಗಲೂ ನಾವು ಅಲ್ಲೇ ಮೆರವಣಿಗೆ ಮಾಡಿದ್ದೇವೆ. ಹೀಗಾಗಿ ಇಲ್ಲೂ ಮೆರವಣಿಗೆಯ ಬಗ್ಗೆ ಈ ವರ್ಷ ಯೋಜನೆ ಇದೆ ಎಂದರು. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಸಂಜೆ ನಿರ್ಧಾರ: ಸಿಎಂ ಬೊಮ್ಮಾಯಿ
ಮುಸ್ಲಿಂ ಸಂಘಟನೆ ಸುಪ್ರೀಂ ಕೋರ್ಟ್ ಹೋಗುವುದಾದರೆ ಹೋಗಲಿ. ನಮಗೆ ಯಾವ ಅಭ್ಯಂತರ, ಭಯವೂ ಇಲ್ಲ. ಅವರು ಸುಪ್ರೀಂ ಕೋರ್ಟ್ಗೆ ಹೋದರೆ ನಾವು ಕೂಡಾ ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ. ನಮ್ಮ ಒಕ್ಕೂಟ ಒಡೆಯಲು ಕೆಲ ಕುತಂತ್ರಿಗಳು ಭಾರೀ ಪ್ರಯತ್ನ ಮಾಡಿದ್ದಾರೆ. ಆದರೆ ನಾವು ಒಗ್ಗಟ್ಟಿನಲ್ಲಿದ್ದೇವೆ. ಇಂದು ಸಂಜೆಯಷ್ಟರಲ್ಲಿ ಸರ್ಕಾರ ಅನುಮತಿ ಕೊಡುವ ನಿರೀಕ್ಷೆ ಇದೆ. ಈ ಪ್ರದೇಶದಲ್ಲಿ ಬಕ್ರೀದ್ ರಂಜಾನ್ ಕೂಡ ಮಾಡಲಿ, ಗಣೇಶೋತ್ಸವವನ್ನೂ ಮಾಡಲಿ ಎಂದರು.