ಚಾಮರಾಜನಗರ: ಹಸಿರ ಕಾನನದಲ್ಲಿ ನೆಲೆನಿಂತಿರುವ ಯಳಂದೂರು ತಾಲೂಕಿನ ಬಿಳಿಗಿರರಂಗನಾಥನಿಗೆ 5 ತಿಂಗಳಿನಲ್ಲಿ 25 ಲಕ್ಷ ರೂ. ಕಾಣಿಕೆ ಹರಿದುಬಂದಿದೆ. ಆದರೆ ಇದರಲ್ಲಿ 60,500 ಚಲಾವಣೆಯಾಗದ ಹಳೇ ನೋಟುಗಳು ದೊರೆತಿವೆ.
ಸೋಮವಾರ ತಡರಾತ್ರಿವರೆಗೆ ನಡೆದ ದೇಗುಲ ಹುಂಡಿ ಎಣಿಕೆಯಲ್ಲಿ 25,29,383 ರೂ. ಸಂಗ್ರಹವಾಗಿದ್ದು, ಈ ಬಾರಿಯೂ ಚಲಾವಣೆಯಾಗದ ಕಂತೆ – ಕಂತೆ ಹಣ ರಂಗಪ್ಪನ ಪಾಲಾಗಿದೆ. 500 ರೂ. ನೋಟಿನ ಕಂತೆಗಳಲ್ಲಿ ಒಟ್ಟು 60,500 ರೂ. ಹಳೇ ನೋಟ್ಗಳನ್ನು ಭಕ್ತನೊಬ್ಬ ಹಾಕಿದ್ದಾನೆ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ನಡೆದ ಹುಂಡಿ ಎಣಿಕೆಯಲ್ಲೂ 55 ಸಾವಿರ ರೂ. ಚಲಾವಣೆಯಾಗದ ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದವು.
ಒಟ್ಟು ಎರಡು ಬಾರಿ ಹುಂಡಿ ಎಣಿಕೆಯಿಂದ 1,15,000 ಹಳೇ ನೋಟುಗಳನ್ನು ಗಿರಿಜನರ ಆರಾಧ್ಯದೈವ ರಂಗನಾಥ ಪಡೆದಿದ್ದಾನೆ. ಒಟ್ಟಿನಲ್ಲಿ ಕೂಡಿಟ್ಟ ಕಪ್ಪು ಹಣವನ್ನು ಭಕ್ತರು ಗೋವಿಂದನ ಪಾದಕ್ಕೆ ಸಮರ್ಪಿಸುತ್ತಿದ್ದಾರೆ.