ಮೈಸೂರು: ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಉಂಟಾಗಿರುವ ಭೀಕರ ಜಲ ಪ್ರಳಯಕ್ಕೆ ಅಕ್ಷರಶಃ ಅಲ್ಲಿನ ಜನರು ನಲುಗಿ ಹೋಗಿದ್ದಾರೆ. ಇದೀಗ ಅವರಿಗೆ ತಿನ್ನಲು ಆಹಾರ ಪದಾರ್ಥಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನ ಸಂಸ್ಥೆ(ಸಿಎಫ್ ಟಿಆರ್ಐ) ನಿಂದ ಕೊಡಗು ಹಾಗೂ ಕೇರಳ ನಿರಾಶ್ರಿತರಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಸಿಎಫ್ಟಿಆರ್ ಐನಿಂದ ಚಪಾತಿ, ಟೊಮೆಟೋ ಚಟ್ನಿ, ಉಪ್ಪಿಟ್ಟು, ಅವಲಕ್ಕಿ ಚಿತ್ರಾನ್ನ, ಎನರ್ಜಿ ಬಿಸ್ಕೇಟ್ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಿ ಕಳುಹಿಕೊಡಲಾಗುತ್ತಿದೆ. ಈ ಆಹಾರ ಪದಾರ್ಥಗಳು 10 ರಿಂದ 15 ದಿನಗಳಾದರೂ ಕೆಡದ ರೀತಿಯಲ್ಲಿ ಸಂರಕ್ಷಣೆ ಮಾಡಲಾಗಿದ್ದು, ನಿರಾಶ್ರಿತರಿಗೆ ಆಹಾರ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕೊಡಗು ಹಾಗೂ ಕೇರಳದಲ್ಲಿ ರಸ್ತೆ ಸರಿ ಇರುವ ಪ್ರದೇಶಗಳಗೆ ಗೂಡ್ಸ್ ವಾಹನಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. ರಸ್ತೆಗಳು ಇಲ್ಲದ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ಅಹಾರ ಪೂರೈಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಕಳೆದ ಶುಕ್ರವಾರದಿಂದ ಸಿಎಫ್ಟಿಆರ್ಐ ಈ ಕೆಲಸ ಮಾಡುತ್ತಿದೆ.
ಈಗಾಗಲೇ ಕೊಡಗು ಪ್ರವಾಹ ಸಂತ್ರಸ್ತರಿಗೆ ರಾಜ್ಯದಾದ್ಯಂತ ಅಪಾರ ಪ್ರಮಾಣದ ದಾಸ್ತಾನುಗಳು ಪರಿಹಾರ ಕೇಂದ್ರಗಳಿಗೆ ತಲುಪಿವೆ. ಆದರೆ ಸಂತ್ರಸ್ತರು ಮಳೆ ನಿಂತ ಮೇಲೆ ನಾವು ನೆಲೆಸಲು ಒಂದು ಮನೆ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅನೇಕ ಜನರು ಆರ್ಥಿಕ ರೂಪದಲ್ಲಿ ಕೊಡಗು ಸಂತ್ರಸ್ತರಿಗೆ ದೇಣಿಗೆ ನೀಡುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv