ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ‘ಪೌರತ್ವ ವಿವಾದ’ಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ರಾಹುಲ್ ಅವರಿಗೆ ನೋಟಿಸ್ ನೀಡಿದ್ದು, 15 ದಿನಗಳ ಒಳಗೆ ಉತ್ತರಿಸಬೇಕೆಂದು ಸೂಚಿಸಿದೆ.
ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯಣ್ ಸ್ವಾಮಿ ಅವರು ನೀಡಿದ ದೂರಿನ ಅನ್ವಯ ಈ ನೋಟಿಸ್ ಜಾರಿ ಮಾಡಲಾಗಿದ್ದು, ಹಲವು ವರ್ಷಗಳ ಹಿಂದೆಯೇ ರಾಹುಲ್ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು. ಅಲ್ಲದೇ ಸ್ವತಃ ರಾಹುಲ್ ಗಾಂಧಿ ಅವರೇ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದರು.
ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಸುಬ್ರಮಣಿಯನ್ ಸ್ವಾಮಿ ಮನವಿ ಮಾಡಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ದೂರು ಸ್ವೀಕರಿಸಿರುವ ಗೃಹ ಇಲಾಖೆ, ನೋಟಿಸ್ ನೀಡಿ ‘ಇಂಗ್ಲೆಂಡ್ ನಲ್ಲಿ ನೀವು ಬ್ಯಾಕೋಪ್ಸ್ ಲಿಮಿಟೆಡ್ ಹೆಸರಿನ ಕಂಪನಿಯನ್ನು 2003ರಂದು ನೋಂದಾಯಿಸಿದ್ದೀರಿ. 51 ಸೌತ್ ಗೇಟ್ ಸ್ಟ್ರೀಟ್, ವಿನ್ ಚೆಸ್ಟರ್, ಹಂಪ್ ಶಿರ್ ಎಸ್ಒ239 ಇಎಚ್ ವಿಳಾಸದಲ್ಲಿ ಈ ಕಂಪನಿ ಇದೆ. ಮತ್ತು ಈ ಕಂಪನಿ ನಿರ್ದೇಶಕರಲ್ಲಿ ನೀವು ಒಬ್ಬರು ಹಾಗೂ ಕಾರ್ಯದರ್ಶಿಯಾಗಿದ್ದೀರಿ” ಎಂದು ತಿಳಿಸಿದೆ. ಅಲ್ಲದೇ ದೂರಿನಲ್ಲಿ ಹೇಳಿರುವಂತೆ ಕಂಪನಿ ವಾರ್ಷಿಕ ಆದಾಯವನ್ನು 2005 ಅಕ್ಟೋಬರ್ 10 ರಂದು ಮತ್ತು 2006ರ ಅಕ್ಟೋಬರ್ 31ರಂದು ಸಲ್ಲಿಸಲಾಗಿದೆ. ಅಲ್ಲಿ ನಿಮ್ಮ ಜನ್ಮ ದಿನಾಂಕ 1970 ಜೂನ್ 19 ಎಂದು ಹಾಗೂ ನೀವು ಬ್ರಿಟಿಷ್ ನಾಗರಿಕರು ಎಂದು ಘೋಷಿಸಿದ್ದಿರಿ. 2009ರ ಫೆಬ್ರವರಿ 17 ರಂದು ಕಂಪನಿ ವಿಸರ್ಜಿಸುವ ಅರ್ಜಿಯಲ್ಲೂ ಬ್ರಿಟಿಷ್ ನಾಗರಿಕ ಎಂದು ಹೇಳಿದ್ದೀರಿ’. ಈ ಬಗ್ಗೆ ವಾಸ್ತವ ಸ್ಥಿತಿಯನ್ನು 15 ದಿನದೊಳಗೆ ತಿಳಿಸುವಂತೆ ವಿವರಣೆ ಕೇಳಿದೆ.
ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಸುದ್ದಿಗೋಷ್ಠಿ ನಡೆಸಿ ರಾಹುಲ್ ಬ್ರಿಟಿಷ್ ಪ್ರಜೆಯೇ? ಬ್ರಿಟಿಷ್ ಕಂಪನಿಯೊಂದರ ದಾಖಲೆಗಳಲ್ಲಿ ರಾಹುಲ್ ಬ್ರಿಟಿಷ್ ಪ್ರಜೆ ಎಂದು ಉಲ್ಲೇಖ ಆಗಿರುವುದು ಅಚ್ಚರಿ ತಂದಿದೆ. ಹೀಗಾಗಿ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ಈ ನೋಟಿಸ್ ಲೋಕಸಭಾ ಚುನಾವಣೆ ಪ್ರಕ್ರಿಯೆ ನಡೆಯುವ ವೇಳೆಯೇ ಜಾರಿಯಾಗಿದ್ದು, ರಾಹುಲ್ ಉತ್ತರ ಪ್ರದೇದ ಅಮೇಥಿ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಪೌರತ್ವದ ವಿಚಾರಕ್ಕೆ ಸಂಬಂಧಿದಂತೆ ರಾಹುಲ್ ಗಾಂಧಿ ತಮ್ಮ ಅಫಿಡವಿಟ್ ಸಲ್ಲಿಸುವ ವೇಳೆ ಮಾಹಿತಿಯನ್ನ ಮುಚ್ಚಿಟ್ಟಿದ್ದು, ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಅಮೇಠಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ದೂರು ನೀಡಿದ್ದರು. ರಾಹುಲ್ ಬ್ರಿಟಿಷ್ ಪೌರತ್ವ ಹೊಂದಿರುವುದಿಂದ ಅವರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ಅಮೇಥಿ ಪಕ್ಷೇತರ ಅಭ್ಯರ್ಥಿಯೂ ಕೂಡ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿಗೆ ಚುನಾವಣಾ ಅಧಿಕಾರಿ ಪೌರತ್ವ ಪರಿಶೀಲನೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿ ನಾಮಪತ್ರವನ್ನು ಪುರಸ್ಕರಿಸಿದ್ದರು.