ಹಾಸನ: ಆಸ್ತಿ ಆಸೆಯಿಂದ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಕೊಲೆ ನಡೆದ 24 ಗಂಟೆಯೊಳಗೆ ಹಾಸನ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಸೆಪ್ಟೆಂಬರ್.16 ರಂದು ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದ ಜಮೀನೊಂದರ ಬಳಿ 32 ವರ್ಷದ ಜಲೇಂದ್ರ ಕೊಲೆಯಾಗಿದ್ದರು. ಈ ವೇಳೆ ಮೃತದೇಹದ ಬಳಿ ಬಿಯರ್ ಬಾಟಲಿಗಳು ಪತ್ತೆಯಾಗಿತ್ತು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಜಲೇಂದ್ರನ ಅಣ್ಣ ಮಹೇಶ್, ತಮ್ಮನ ಕೊಲೆಗೆ ಕಣ್ಣೀರು ಹಾಕಿದ್ದರು. ನಾನು ಡೈರಿಗೆ ಹಾಲು ಹಾಕಿ ಬರುವಾಗ ಜಮೀನಿನ ಬಳಿ ಬಂದೆ. ಈ ವೇಳೆ ಯಾರೋ ನನ್ನ ತಮ್ಮನನ್ನು ಕೊಲೆ ಮಾಡಿದ್ದು, ಗೊತ್ತಾಯಿತು ಎಂದು ಕಥೆ ಕಟ್ಟಿದ್ದನು. ಆದರೆ ಆರು ಎಕರೆ ಜಮೀನಿನ ಆಸೆಗಾಗಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಕೊಲೆಯಾದ ಜಲೇಂದ್ರ ಜೆಸಿಬಿ ಆಪರೇಟರ್ ಆಗಿದ್ದು, ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜೊತೆಗೆ ತನಗೆ ಮದುವೆ ಮಾಡುವಂತೆ ದಿನಾ ಕುಡಿದು ಗಲಾಟೆ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಮಹೇಶ್ ಜಲೇಂದ್ರನನ್ನು ಮದುವೆಗೆ ಮುಂಚೆ ಕೊಂದರೆ ಆಸ್ತಿಯೆಲ್ಲ ತನಗೆ ಉಳಿಯುತ್ತೆ ಎಂದು ಪ್ಲಾನ್ ಮಾಡಿದ್ದಾನೆ. ಅದರಂತೆ ಜಲೇಂದ್ರನಿಗೆ ಜಮೀನಿನ ಬಳಿ ಕುಡಿಸಿ, ನಂತರ ಕೊಲೆ ಮಾಡಿ ಮನೆಗೆ ಬಂದಿದ್ದಾನೆ. ಬೆಳಗ್ಗೆ ಎದ್ದು ತಮ್ಮನನ್ನು ಯಾರೋ ಕೊಂದಿರುವುದಾಗಿ ನಾಟಕವಾಡಿದ್ದನು. ಇದನ್ನೂ ಓದಿ: ಫೋನಿನಲ್ಲಿ ಮಾತಾಡ್ಕೊಂಡು ಒನ್ ವೇನಲ್ಲಿ ಬಂದು ಮತ್ತೊಬ್ಬನ ಕೈ ಕಟ್ ಮಾಡಿದ!
ಇದೀಗ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು, ಅಣ್ಣ ಮಹೇಶ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಆತನನ್ನು ಬಂಧಿಸಿದ್ದು, ಘಟನೆ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಾಳೆಎಲೆಯಲ್ಲಿ ಮೂಡಿದ ಮೋದಿ ಚಿತ್ರ