-ಹಣ, ಒಡವೆ ದೋಚಿ ಅಣ್ಣನೊಂದಿಗೆ ಎಸ್ಕೇಪ್
ಡೆಹ್ರಾಡೂನ್: ಮದುವೆಯ ಮೊದಲ ರಾತ್ರಿಯೇ ನವವಧು ಹಣ, ಚಿನ್ನವನ್ನು ದೋಚಿಕೊಂಡು ತನ್ನ ಸ್ವಂತ ಸಹೋದರನ ಜೊತೆ ಪರಾರಿಯಾಗಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಶಹಜಹಾನ್ಪುರ ನಿವಾಸಿ ನವವಧು ವರನ ಮನೆಯಿಂದ ಹಣ, ಒಡವೆಯನ್ನು ದೋಚಿಕೊಂಡು ಅಣ್ಣನೊಂದಿಗೆ ಪರಾರಿಯಾಗಿದ್ದಾಳೆ.
ಏನಿದು ಪ್ರಕರಣ:
ಚಂಡೀಗಢದ ಕಲ್ಕಾ ಪ್ರದೇಶದ ನಿವಾಸಿ ವರನ ಸೋದರಿ ಸೋನಿಯಾ ತಮ್ಮ ಸಂಬಂಧಿಕರ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಶಹಜಹಾನ್ಪುರದ ಹುಡುಗಿಯ ಬಗ್ಗೆ ತಿಳಿದುಕೊಂಡಿದ್ದಾಳೆ. ಆಕೆ ತನ್ನ ಅಣ್ಣನ ಜೊತೆ ವಾಸವಾಗಿದ್ದಳು. ನಂತರ ಹುಡುಗಿಯನ್ನು ಒಪ್ಪಿಕೊಂಡು ಸೋನಿಯಾ ತಮ್ಮ ಸಹೋದರನ ಜೊತೆ ಮದುವೆ ಮಾಡಿಸಿದ್ದಾಳೆ.
ವರನ ಕುಟುಂದವರು ನವ ವಧು ಮತ್ತು ವರನಿಗೂ ಹರಿದ್ವಾರದಲ್ಲಿ ಮದುವೆ ಮಾಡಿ ಹೋಟೆಲಿನಲ್ಲಿ ಫಸ್ಟ್ ನೈಟ್ ಏರ್ಪಡಿಸಿದ್ದರು. ಅದರಂತೆಯೇ ಫಸ್ಟ್ ನೈಟ್ ರೂಮಿಗೆ ವಧುವನ್ನು ಕಳುಹಿಸಿ ಸಂಬಂಧಿಕರು ಬೇರೆ ರೂಮಿನಲ್ಲಿ ಹೋಗಿ ಮಲಗಿಕೊಂಡಿದ್ದರು.
ಮರುದಿನ ವರನಿಗೆ ಎಚ್ಚರವಾದಾಗ ವಧು ಕಾಣಿಸಲಿಲ್ಲ. ಬಳಿಕ ಪಕ್ಕದ ರೂಮಿನಲ್ಲಿರಬೇಕು ಎಂದು ಹೋಗಿ ನೋಡಿದ್ದಾನೆ. ಅಲ್ಲೂ ವಧು ಇರಲಿಲ್ಲ. ನಂತರ ವರನ ಜೊತೆ ಸಂಬಂಧಿಕರು ಸೇರಿಕೊಂಡು ಇಡೀ ಹೋಟೆಲ್ ಹುಡುಕಾಡಿದ್ದಾರೆ. ಆದರೆ ವಧು ಮಾತ್ರ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಸುಮಾರು 2 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 50,000 ಸಾವಿರ ನಗದು ಕೂಡ ಕಾಣೆಯಾಗಿತ್ತು. ಆಗ ಸಂಬಂಧಿಕರಿಗೆ ವಧುವಿನ ಬಗ್ಗೆ ಅನುಮಾನ ಬಂದಿದೆ.
ವರ, ಆತನ ಸಂಬಂಧಿಕರು ಮಲಗಿಕೊಂಡ ನಂತರ ಹಣ, ಒಡೆಯವನ್ನು ದೋಚಿಕೊಂಡು ವಧು ತನ್ನ ಸೋದರನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದಿದೆ. ತಕ್ಷಣ ವರನ ಸಂಬಂಧಿಕರು ಹರಿದ್ವಾರ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ರುಡ್ಕಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿ ಎಂದು ಹೇಳಿದ್ದಾರೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.