ದಾವಣಗೆರೆ: ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಅವರ ಪರವಾಗಿ ಗಟ್ಟಿಯಾಗಿ ನಿಲ್ಲಲು ದಾವಣಗೆರೆಯ ಹೋಟೆಲ್ ಒಂದರಲ್ಲಿ ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ಟೀಮ್ ಸಭೆ ನಡೆಸಿದೆ. ಈ ಮೂಲಕ ಬಿಜೆಪಿಯ ಯತ್ನಾಳ್ ಬಣಕ್ಕೆ ಟಕ್ಕರ್ ಕೊಡಲು ವಿಜಯೇಂದ್ರ ಬಣ ತಯಾರಾಗಿದೆ.
ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ 40ಕ್ಕೂ ಹೆಚ್ವು ಮಾಜಿ ಶಾಸಕರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಫೆಬ್ರವರಿ 27ಕ್ಕೆ ದಾವಣಗೆರೆಯಲ್ಲಿ ಸಮಾವೇಶಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಈ ಮೂಲಕ ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟು ಹಬ್ಬದಂದು ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಪಕ್ಷದ ನಾಯಕರು ಮುಂದಾಗಿದ್ದಾರೆ.
ಸಭೆಯಲ್ಲಿ ಬೃಹತ್ ಸಮಾವೇಶಕ್ಕೆ 20 ಲಕ್ಷ ಜನರನ್ನು ಸೇರಿಸುವ ಸಂಕಲ್ಪ ಮಾಡಲಾಗಿದೆ. ಇನ್ನೂ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವಂತೆ ಒತ್ತಾಯ ಮಾಡಲಾಗಿದೆ. ಅಲ್ಲದೇ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ, ಸಭೆಯಲ್ಲಿದ್ದ ಎಲ್ಲಾ ಮಾಜಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಟಿಕೇಟ್ ನೀಡುವಂತೆ ಮನವಿ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಮತ್ತೆ ಈ ತಿಂಗಳ ಕೊನೆಯಲ್ಲಿ ದಾವಣಗೆರೆಯ ಕಾರ್ಯಕ್ರಮದ ಪೂರ್ವಾಭಾವಿ ಸಭೆಯನ್ನು ಮಾಡುತ್ತೇವೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ.
ಸಭೆಯ ಬಗ್ಗೆ ಮಾಹಿತಿ ನೀಡಿದ ರೇಣುಕಾಚಾರ್ಯ ಅವರು, ಯತ್ನಾಳ್ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಜ್ಯಾಧ್ಯಕ್ಷರಿಗೆ ಬೆಂಬಲ ನೀಡಲು ಸಮವೇಶ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಬಣ ರಾಜಕೀಯ ಇಲ್ಲ. ಎಲ್ಲರಿಗೂ ಅಹ್ವಾನ ಮಾಡುತ್ತೇವೆ. ಯಾರ ವಿರುದ್ಧವೂ ಶಕ್ತಿ ಪ್ರದರ್ಶನದ ಸಮವೇಶ ಇದಲ್ಲ ಎಂದಿದ್ದಾರೆ.
ಈ ಸಮವೇಶಕ್ಕೆ ಮಠಾಧೀಶರನ್ನು ರಾಜಕೀಯ ನಾಯಕರನ್ನು ಅಹ್ವಾನಿಸುತ್ತೇವೆ. ಇದು ಬಿಜೆಪಿಯ ಪರ್ಯಾಯ ಸಭೆಯಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.