ಭೋಪಾಲ್: ಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಜೊತೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ವಾಲಿಯರ್-ಚಂಬಲ್ ಪ್ರದೇಶದ ನಾಯಕ ಪ್ರೀತಂ ಸಿಂಗ್ ಲೋಧಿ ಅವರು ವಿವಾದತ್ಮಕ ಹೇಳಿಕೆ ನೀಡಿದ್ದು, ಇದೀಗ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ.
ಶನಿವಾರ ಬೆಳಗ್ಗೆ ಅವರನ್ನು ಭೋಪಾಲ್ನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಕರೆಸಿ, ಪ್ರೀತಂ ಸಿಂಗ್ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಬುಧವಾರ ಯೋಧ ರಾಣಿ ಅವಂತಿಬಾಯಿ ಲೋಧಿ ಅವರ ಜನ್ಮದಿನದಂದು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರೀತಂ ಸಿಂಗ್ ಲೋಧಿ, ಬ್ರಾಹ್ಮಣರು ಧರ್ಮದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಪ್ರೀತಂ ಸಿಂಗ್ ಲೋಧಿ ಹೇಳಿಕೆ ವಿರುದ್ಧ ಬಿಜೆಪಿ ಯುವ ಘಟಕದ ನಾಯಕ ಪ್ರವೀಣ್ ಮಿಶ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾದರು. ಅಲ್ಲದೇ ಲೋಧಿ ಅವರು ಜನರ ನಡುವೆ ದ್ವೇಷವನ್ನುಂಟುಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ವಿಜಯಪುರದ ಹಲವೆಡೆ ಭಾರೀ ಶಬ್ದದೊಂದಿಗೆ ಕಂಪಿಸಿದ ಭೂಮಿ
62 ವರ್ಷದ ಅವರು ಈಗಾಗಲೇ 37 ಪ್ರಕರಣಗಳ ಆರೋಪಿಯಾಗಿದ್ದಾರೆ. ನಾಲ್ಕು ಕೊಲೆ ಯತ್ನ ಪ್ರಕರಣಗಳು ಮತ್ತು ಎರಡು ಕೊಲೆ ಪ್ರಕರಣಗಳು ಇವರ ಮೇಲಿದೆ. ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರಿಗೆ ಆತ್ಮೀಯರಾಗಿರುವ ಪ್ರೀತಂ ಸಿಂಗ್ ಲೋಧಿ ಅವರು 2013 ಮತ್ತು 2018 ರ ವಿಧಾನಸಭಾ ಚುನಾವಣೆಯಲ್ಲಿ ಪಿಚೋರ್ (ಶಿವಪುರಿ) ನಿಂದ ಬಿಜೆಪಿ ಟಿಕೆಟ್ನಲ್ಲಿ ಸೋತಿದ್ದರು. ಆದರೆ ಗ್ವಾಲಿಯರ್-ಚಂಬಲ್ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾಗಿದ್ದಾರೆ.
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಹಿರಿಯ ಮತ್ತು ಆರು ಬಾರಿ ಹಾಲಿ ಶಾಸಕ ಕೆಪಿ ಸಿಂಗ್ ‘ಕಕ್ಕಜು’ ವಿರುದ್ಧ ಪಿಚೋರ್ ವಿಧಾನಸಭಾ ಕ್ಷೇತ್ರದಿಂದ ಪ್ರೀತಂ ಸಿಂಗ್ ಲೋಧಿ ಸ್ಪರ್ಧಿಸಿದ್ದರು. 2018ರ ಚುನಾವಣೆಯಲ್ಲಿ ಕೇವಲ 2,500ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು. ಇದನ್ನೂ ಓದಿ: ಷರತ್ತಿನೊಂದಿಗೆ ಗಣೇಶೋತ್ಸವಕ್ಕೆ BBMP ಗ್ರೀನ್ ಸಿಗ್ನಲ್ – ಈದ್ಗಾ ಮೈದಾನ ಗಣಪನಿಗೆ ಸಿಕ್ಕಿಲ್ಲ ಪರ್ಮಿಷನ್
ಶಿವಪುರಿಯ ಖರೈಹ್ ಗ್ರಾಮದಲ್ಲಿ ಬುಧವಾರ ನಡೆದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಾಹ್ಮಣರು ಹಿಂದಿನ ಜನರ ಹಣ ಮತ್ತು ಸಂಪನ್ಮೂಲದಿಂದ ಏಳಿಗೆ ಹೊಂದುತ್ತಿದ್ದರು. ಒಳ್ಳೆಯ ಕುಟುಂಬದ ಸುಂದರ ಮಹಿಳೆಯರನ್ನು ನೋಡಿ, ಬ್ರಾಹ್ಮಣರು ಆ ಮಹಿಳೆಯರ ಮನೆಯಲ್ಲಿ ಊಟ ಮಾಡಲು ಬಯಸುತ್ತಾರೆ. ಬ್ರಾಹ್ಮಣರು ಯುವತಿಯರನ್ನು ಮುಂದಿನ ಸಾಲಿನಲ್ಲಿ ಕೂರಿಸಿ, ವಯಸ್ಸಾದ ಮಹಿಳೆಯರನ್ನು ಹಿಂದಿನ ಸಾಲಿನಲ್ಲಿ ಕೂರಿಸುತ್ತಾರೆ ಎಂದಿದ್ದಾರೆ.