ಬೆಂಗಳೂರು: `ಕಾರ್ಮುಗಿಲು’, `ರಮ್ಯಚೈತ್ರಕಾಲ’, `ಮೇಘವೇ ಮೇಘವೇ’ ಸಿನಿಮಾಗಳಲ್ಲಿ ಅಭಿನಯಿಸಿರೋ ಕಲಾವಿದ ರಾಮ್ಗೆ ಕೋಟಿಗಟ್ಟಲೆ ದೋಖಾ ಆಗಿದೆ.
ಒಳ್ಳೆ ಕಥೆ ರೆಡಿಯಾಗಿದೆ, ಸಿನಿಮಾ ಮಾಡ್ತಿದ್ದಿನಿ, ನೀವೇ ಹೀರೋ ಅಂತ ಹೇಳಿದ ಅನೇಕ ನಿರ್ಮಾಪಕರು ರಾಮ್ ಕೈಯಿಂದ ಸುಮಾರು 1.5 ಕೋಟಿಯಷ್ಟು ಹಣ ಪಡೆದಿದ್ದಾರೆ. 2009 ರಲ್ಲಿ ರಾಮ್ ಇಂದ ಸುಮಾರು 20 ರಿಂದ 25 ಲಕ್ಷ ಹಣವನ್ನು ನಿರ್ದೇಶಕ ಗುರುಪ್ರಸಾದ್ ಪಡೆದಿದ್ದರು. ಈಗ ಹಣ ಕೇಳಿದ್ರೆ ನಾನು ಸ್ವಲ್ಪ ಸ್ಟೇಬಲ್ ಆದ್ಮೇಲೆ ಕೊಡ್ತಿನಿ ಎಂದು ಹೇಳುತ್ತಿದ್ದಾರೆ ಅಂತ ರಾಮ್ ಇದೀಗ ಆರೋಪಿಸಿದ್ದಾರೆ.
2014ರಲ್ಲಿ ನಿರ್ಮಾಪಕ, ನಿರ್ದೇಶಕ ಯೋಗೀಶ್ ಹುಣಸೂರು 35 ಲಕ್ಷ ರೂ. ಪಡೆದಿದ್ದಾರೆ. 2014 ರಿಂದ ಹಣನೂ ವಾಪಸ್ ಮಾಡಿಲ್ಲ. ಸಿನಿಮಾನೂ ಮಾಡಿಲ್ಲ. ಇದರಿಂದ ಬೇಸತ್ತ ಕಲಾವಿದ ರಾಮ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋರ್ಟ್ ತೀರ್ಪಿನಂತೆ ಯೋಗೀಶ್ ಹುಣಸೂರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.
ಲೂಸ್ಮಾದ ಯೋಗಿ ಅಭಿನಯದ `ಕಾಲಭೈರವ’ ಸಿನಿಮಾ ನಿರ್ಮಾಪಕ ಕುಮರೆಶ್ ಬಾಬು ಕೂಡ ಇವರಿಂದ 40 ಲಕ್ಷ ರೂ. ಪಡೆದಿದ್ದಾರೆ. ಈ ವಿಚಾರ ಕೂಡ ಕೋರ್ಟ್ ಅಂಗಳದಲ್ಲಿದೆ. ಒಟ್ಟಾರೆ ಕಲಾವಿದ ಆಗಬೇಕು. ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾ ಮಾಡಬೇಕು ಅನ್ನೋ ಕನಸಿನಿಂದ ಗಾಂಧಿನರಕ್ಕೆ ಬಂದ ರಾಮ್ ಇದೀಗ ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ.
ಸಿನಿಮಾ ರಂಗ ಅಂದ ಮೇಲೆ ನಂಬಲೇ ಬೇಕಾಗುತ್ತದೆ. ಇವರ್ಯಾರೂ ಹೊಸ ನಿರ್ದೇಶಕ ಅಥವಾ ನಿರ್ಮಾಪಕರಲ್ಲ. ಈಗಾಗಲೇ ಅವರು ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇಂತಹವರ ಜೊತೆ ನಾವು ಕೆಲಸ ಮಾಡಿದ್ರೆ ನಮಗೆ ಒಂದು ಒಳ್ಳೆಯ ಆರಂಭ ಸಿಗುತ್ತದೆ. ಒಳ್ಳೋಳ್ಳೆಯ ಪಾತ್ರಗಳನ್ನು ಕೂಡ ಮಾಡಬಹುದು ಅನ್ನೋ ನಿಟ್ಟಿನಲ್ಲಿ ನಾನು ಈ ಮೊದಲು ಇವುಗಳನ್ನು ಬಹಿರಂಗಪಡಿಸಿಲ್ಲ ಅಂತ ರಾಮ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.