ಬೀದರ್: ಅಂಗಡಿ ಪೂಜೆ ವೇಳೆ ಡಿಜೆ ಸೌಂಡ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದು, ಓರ್ವ ಕೊಲೆಯಾದ ಘಟನೆ ಭಾಲ್ಕಿ ತಾಲೂಕಿನ ಸಿಕ್ಕಂದರ್ಬಾದ್ವಾಡಿ ಗ್ರಾಮದಲ್ಲಿ ನಡೆದಿದೆ.
ಸಿಕ್ಕಂದರ್ಬಾದ್ವಾಡಿ ಗ್ರಾಮದ ಜರೆಪ್ಪ (35) ಕೊಲೆಯಾದ ವ್ಯಕ್ತಿ. ಜರೆಪ್ಪ ಅವರು ಮಂಗಳವಾರ ತನ್ನ ಸ್ನೇಹಿತನ ಅಂಗಡಿ ಪೂಜೆಗೆ ಹೋಗಿದ್ದರು. ಈ ವೇಳೆ ಸ್ನೇಹಿತರು ಡಿಜೆ ಹಚ್ಚಿ ಸಂಭ್ರಮಿಸುತ್ತಿದ್ದರು. ಇದರಿಂದಾಗಿ ಕೋಪಗೊಂಡ ಗ್ರಾಮದ ಮತ್ತೊಂದು ಗುಂಪಿನ ಯುವಕರು ಡಿಜೆ ಸೌಂಡ್ ಕಡಿಮೆ ಮಾಡುವಂತೆ ತಿಳಿಸಿದ್ದಾರೆ. ಆದರೆ ಎರಡೂ ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜರೆಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜರೆಪ್ಪನ ಸಂಬಂಧಿಕರು ವೈದ್ಯರ ಸಲಹೆಯಂತೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ಗೆ ಕರೆದೊಯ್ಯ ಮುಂದಾಗಿದ್ದರು. ಆದರೆ ಹೈದ್ರಾಬಾದ್ಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯ ಜರೆಪ್ಪ ಮೃತಪಟ್ಟಿದ್ದಾರೆ.
ಗುಂಪು ಘರ್ಷಣೆಯಲ್ಲಿ ವ್ಯಕ್ತಿ ಸಾವನ್ನಪ್ಪಿದರಿಂದ ಸಿಕ್ಕಂದರ್ಬಾದ್ವಾಡಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಭೀಗಿ ಭದ್ರತೆ ಮಾಡಲಾಗಿದೆ. ಗ್ರಾಮಕ್ಕೆ ಎಸ್ಪಿ ಟಿ.ಶ್ರೀಧರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಖಟಕ್ ಚಿಂಚೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.