ರಾಯಚೂರು: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Yatra) ರಾಯಚೂರಿನಲ್ಲಿ Raichuru) ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆ 6:10ಕ್ಕೆ ರಾಯಚೂರು ತಾಲೂಕಿನ ಯರಗೇರಾ ದಿಂದ ಪಾದಯಾತ್ರೆ ಆರಂಭವಾಯಿತು.
ಮಾರ್ಗ ಮಧ್ಯೆ ಮಿಟ್ಟಿಮಲ್ಕಾಪುರ ಗ್ರಾಮದಲ್ಲಿ ಉಪ್ಪಾಲ್ ನರಸಪ್ಪ ಎಂಬುವವರ ಮನೆಯಲ್ಲಿ ರಾಹುಲ್ ಗಾಂಧಿ ಉಪಹಾರ ಸೇವನೆ ಮಾಡಿ ಪುನಃ ಪಾದಯಾತ್ರೆ ಆರಂಭಿಸಿದರು. ರಾಹುಲ್ ಗಾಂಧಿ ಜೊತೆ ಡಿಕೆ ಶಿವಕುಮಾರ್ (DK Shivakumar), ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ (Siddaramaiah), ಸುರ್ಜೇವಾಲಾ, ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಸೇರಿ ಹಲವಾರು ಮುಖಂಡರು ಸಾತ್ ನೀಡಿದರು. ಇದನ್ನೂ ಓದಿ: ಮೋದಿ ತವರೂರಿನಲ್ಲಿ ಮುಂದಿನ 7 ದಿನ ಸಂಚಾರ ನಿಯಮ ಉಲ್ಲಂಘಿಸಿದರೂ ದಂಡ ಹಾಕಲ್ಲ
ಪಾದಯಾತ್ರೆ ವೇಳೆ ಮಾಜಿ ಸೈನಿಕರು ರಾಹುಲ್ ಗಾಂಧಿಯನ್ನು ಭೇಟಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಈ ವೇಳೆ ಮಾಜಿ ಸೈನಿಕರೊಂದಿಗೆ ರಾಷ್ಟ್ರಧ್ವಜ ಹಿಡಿದು ರಾಹುಲ್ ಗಾಂಧಿ ಓಡಿದರು. ಸುಮಾರು 100 ಮೀಟರ್ಗೂ ಹೆಚ್ಚು ದೂರ ರಾಹುಲ್ ಗಾಂಧಿ ಓಡಿದರು. ರಾಹುಲ್ ಗಾಂಧಿ ಜೊತೆ ಡಿಕೆಶಿ, ಸುರ್ಜೇವಾಲಾ ಸಹ ಓಡಿಕೊಂಡು ಮುಂದೆ ಬಂದರು. ಭಾರತ್ ಜೋಡೊ ಯಾತ್ರೆಯಲ್ಲಿ ಬ್ಯಾಂಡ್ ವಾದ್ಯ ಸಮೇತ ಭಾಗವಹಿಸಿದ ಸೇವಾದಳವನ್ನು ಸೇರಿಕೊಂಡ ಡಿ.ಕೆ.ಶಿವಕುಮಾರ್ ಬ್ಯಾಂಡ್ ಬಾರಿಸುತ್ತ ಹೆಜ್ಜೆ ಹಾಕಿದರು. ಸುಮಾರು ಒಂದು ಕಿ.ಮೀವರೆಗೆ ಬ್ಯಾಂಡ್ ಬಾರಿಸುತ್ತಲೇ ಪಾದಯಾತ್ರೆ ಮಾಡಿದರು. ರಾಯಚೂರು ನಗರದ ಹೊರವಲಯ ತಲುಪಿದ ಬಳಿಕ ಪಾದಯಾತ್ರೆಗೆ ವಿರಾಮ ನೀಡಲಾಯಿತು. ಇದನ್ನೂ ಓದಿ: ಬಿಜೆಪಿ ಪ್ರಭಾವಿ ಮಾಜಿ ಶಾಸಕನನ್ನು ಸೆಳೆಯಲು ಮುಂದಾದ ಡಿಕೆಶಿ – ಸೀಕ್ರೆಟ್ ಆಪರೇಷನ್ ಪ್ಲಾನ್ ರಿವೀಲ್
ಬೃಂದಾವನ ಹೋಟೆಲ್ನಲ್ಲಿ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದ್ದು ರಾಹುಲ್ ಗಾಂಧಿ ಹಾಗೂ ಪಾದಯಾತ್ರಿಗಳು ವಿರಾಮ ತೆಗೆದುಕೊಂಡರು. ಹೋಟೆಲ್ ಆವರಣದಲ್ಲಿ ಕೃಷಿ ಕಾರ್ಮಿಕರರೊಂದಿಗೆ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಪುನಃ ಪಾದಯಾತ್ರೆ ಆರಂಭವಾಗಲಿದೆ.
ಸಂಜೆ 6 ಗಂಟೆಗೆ ನಗರದ ವಾಲ್ಕಾಟ್ ಮೈದಾನದಲ್ಲಿ ಸೆಮಿ ಪಬ್ಲಿಕ್ ಮೀಟಿಂಗ್ ನಡೆಯಲಿದೆ. ಬಳಿಕ ಯರಮರಸ್ ಬಳಿ ಆನಂದ್ ಪಬ್ಲಿಕ್ ಶಾಲೆಯಲ್ಲಿ ರಾಹುಲ್ ಗಾಂಧಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಈ ಮೂಲಕ ರಾಯಚೂರಿನಲ್ಲಿ ಎರಡನೇ ದಿನದ ಜೋಡೋ ಭಾರತ ಯಾತ್ರೆ ಅಂತ್ಯಗೊಳ್ಳಲಿದೆ.