ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈಗಾಗಲೇ ಟ್ರೇಲರ್, ಹಾಡುಗಳೊಂದಿಗೆ ವ್ಯಾಪಕ ನಿರೀಕ್ಷೆ ಮತ್ತು ಕುತೂಹಲಕ್ಕೆ ಕಾರಣವಾಗಿರುವ ಈ ಸಿನಿಮಾದಲ್ಲಿ ಧನ್ಯಾ ಬಾಲಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ಚಹರೆಗಳು ಟ್ರೇಲರ್ನಲ್ಲಿ ಕಾಣಿಸಿವೆ. ಹಾಗೆ ಕಂಡಿದ್ದಕ್ಕಿಂತಲೂ ಭಿನ್ನವಾದ ಗುಣ ಲಕ್ಷಣಗಳಿರುವ ಸವಾಲಿನಂಥಾ ಪಾತ್ರದಲ್ಲಿ ಕಾಣಿಸಿಕೊಂಡಿರೋ ಧನ್ಯಾ ಪಾತ್ರ ಕೂಡ ಸಾರ್ವಜನಿಕರಿಗೆ ವಿನಂತಿ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಒಂದೆಂಬುದು ಚಿತ್ರ ತಂಡದ ಭರವಸೆ.
ಧನ್ಯಾ ಬಾಲಕೃಷ್ಣ ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವವರು. ಆ ಎರಡೂ ಭಾಷೆಗಳ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಧನ್ಯಾ ಈಗಲೂ ಅಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದ ಮೂಲಕವೇ ಕನ್ನಡಕ್ಕೆ ಆಗಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವರ್ಷಕ್ಕೆ ಹಲವಾರು ಪರಭಾಷಾ ನಟಿಯರ ಆಗಮನವಾಗೋದರಿಂದ ಧನ್ಯಾ ಕೂಡ ಆ ಸಾಲಿಗೇ ಸೇರಿಕೊಳ್ಳುತ್ತಾರೆಂದು ಅನೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಅದು ಶುದ್ಧ ಸುಳ್ಳು.
ಈಗಾಗಲೇ ಧನ್ಯಾ ಪರಭಾಷಾ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಬಹುಭಾಷಾ ನಟಿಯಾಗಿದ್ದರೂ ಕೂಡ ಅವರು ಅಪ್ಪಟ ಕನ್ನಡತಿ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರೋ ಧನ್ಯಾ ತುಂಬಾನೇ ಸ್ಫುಟವಾಗಿ ಕನ್ನಡ ಮಾತಾಡುತ್ತಾರೆ. ಆರಂಭದಿಂದಲೂ ನಟಿಯಾಗಬೇಕೆಂಬ ಆಕಾಂಕ್ಷೆ ಹೊಂದಿದ್ದ ಧನ್ಯಾಗೆ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದ್ದು ಪರಭಾಷೆಯಲ್ಲಿ. ಮೊದಲು ಕನ್ನಡ ಸಿನಿಮಾದಲ್ಲಿಯೇ ನಟಿಸಬೇಕೆಂಬಂಥಾ ಆಕಾಂಕ್ಷೆಯಾಚೆಗೂ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಧನ್ಯಾ ಇಲ್ಲಿ ಮೆಡಿಕಲ್ ಸ್ಟೂಡೆಂಟ್ ಆಗಿ, ಒಂದು ಗಂಭೀರ ಕಾಯಿಲೆಯಿರೋ ಹುಡುಗಿಯಾಗಿ, ರಿಷಿಯ ಸಖಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ತಮ್ಮ ತವರು ನೆಲದಲ್ಲಿಯೇ ನಾಯಕಿಯಾಗಿ ನೆಲೆ ಕಂಡುಕೊಳ್ಳುವ ನಿರೀಕ್ಷೆಯೂ ಧನ್ಯಾರಲ್ಲಿದೆ.