ಬೆಂಗಳೂರು: ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಓರ್ವ ಉದ್ಯೋಗಿಗೆ ಕೊರೊನಾ ಬಂದಿದ್ದ ಶಂಕೆ ವ್ಯಕ್ತವಾಗಿತ್ತು. ಆದರೆ ಫಲಿತಾಂಶ ನಗೆಟಿವ್ ಬಂದಿದ್ದು ಯಾರು ಯಾವುದೇ ಸಿಬ್ಬಂದಿ ಭಯಪಡಬೇಕಾದ ಅಗತ್ಯವಿಲ್ಲ.
ಕೊರೊನಾ ಪೀಡಿತ ವ್ಯಕ್ತಿಯ ಜೊತೆ ಇನ್ಫೋಸಿಸ್ ಸಿಬ್ಬಂದಿಯೊಬ್ಬರು ಸಂಪರ್ಕಕ್ಕೆ ಬಂದಿದ್ದರು. ಆದರೆ ರಕ್ತದ ಫಲಿತಾಂಶದಲ್ಲಿ ನೆಗೆಟಿವ್ ಬಂದಿದೆ ಎನ್ನುವ ವಿಚಾರ ಈಗ ಲಭ್ಯವಾಗಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಐಟಿ ಕಂಪನಿಗಳಿಗೆ ಮನೆಯಿಂದಲೇ ಉದ್ಯೋಗಿಗಳಿಗೆ ಕೆಲಸ ಮಾಡಿಸುವಂತೆ ಮನವಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಕಲಬುರಗಿಯ ಮೃತ ವ್ಯಕ್ತಿ ಸೇರಿ 6 ಮಂದಿ ಕೊರೊನಾ ವೈರಸ್ ಬಂದಿದೆ. ಈ ಪೈಕಿ ಬೆಂಗಳೂರಿನ 5 ಮಂದಿ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿದ್ದಾರೆ.
ಆರಂಭದಲ್ಲಿ ಡೆಲ್ ಕಂಪನಿಯ ಉದ್ಯೋಗಿಗೆ ಕೊರೊನಾ ಬಂದಿತ್ತು. ನಂತರ ಆತನ ಪತ್ನಿ ಮತ್ತು ಮಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಮೈಂಡ್ ಟ್ರೀ ಕಂಪನಿಯ ಉದ್ಯೋಗಿಯದ್ದು ಎರಡನೇ ಕೇಸ್ ಆಗಿದ್ದರೆ ಗುರುವಾರ ಗೂಗಲ್ ಕಂಪನಿಯ ಉದ್ಯೋಗಿಗೆ ಕೊರೊನಾ ಬಂದಿರುವುದು ದೃಢಟ್ಟಿತ್ತು.
ಕರ್ನಾಟಕದಲ್ಲಿ ಕೊರೊನಾ ಶಂಕಿತರ ಸಂಖ್ಯೆ 32ಕ್ಕೆ ಏರಿದ್ದು, ಶುಕ್ರವಾರ ಒಂದೇ ದಿನ 19 ಮಂದಿ ದಾಖಲಾಗಿದ್ದಾರೆ. ಗುರುವಾರ ಮೃತಪಟ್ಟ ವ್ಯಕ್ತಿ ಸೇರಿದಂತೆ ಒಟ್ಟು 6 ಮಂದಿಗೆ ಕೊರೊನಾ ಬಂದಿದ್ದು, ಶುಕ್ರವಾರ ಹೊಸದಾಗಿ ಯಾವುದೇ ಕೇಸ್ ಪತ್ತೆಯಾಗಿಲ್ಲ. 5 ಮಂದಿ ಕೊರೊನಾ ಪೀಡಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಕಲಬುರಗಿ, ದಕ್ಷಿಣ ಕನ್ನಡ, ಹಾಸನದಲ್ಲಿ ನಾಲ್ಕು ಮಂದಿ, ಬೆಂಗಳೂರಿನಲ್ಲಿ 3, ಉಡುಪಿಯಲ್ಲಿ 2, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ತಲಾ ಒಬ್ಬರು ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 3 ಮಂದಿ ಹಾಸನದಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ.
ಒಟ್ಟು ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ 7 ಮಂದಿ, ಉಡುಪಿಯಲ್ಲಿ 5, ಹಾಸನ ಮತ್ತು ಕಲಬುರಗಿಯಲ್ಲಿ 4 ಮಂದಿ ಮೇಲೆ ನಿಗಾ ಇಡಲಾಗಿದೆ. ಕಲಬುರಗಿಯಲ್ಲಿ ಮೃತ ವ್ಯಕ್ತಿ ಹಲವು ಜನರನ್ನು ಸಂಪರ್ಕಿಸಿದ್ದ. ಈ ಪೈಕಿ 30 ಮಂದಿ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. 30 ಜನರಲ್ಲಿ 4 ಮಂದಿ ಮೇಲೆ ಪ್ರತ್ಯೇಕ ನಿಗಾ ವಹಿಸಲಾಗಿದ್ದು ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶ ಬರಬೇಕಿದೆ.