ಬೆಂಗಳೂರು: ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲೊಂದಾದ ಹೊಸಕೋಟೆಯಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದೇ ರಕ್ತ ಚಿಮ್ಮಿದೆ.
ಹೌದು. ಎಂಟಿಬಿ ಮೇಲಿನ ಅಭಿಮಾನದಿಂದ ಮಂಜುನಾಥ್ ತನ್ನ ಎದೆಯ ಬಲಭಾಗಕ್ಕೆ ತಾನೇ ಚಾಕುವಿನಿಂದ ಚುಚ್ಚಿಕೊಂಡಿದ್ದಾರೆ.
ಬಳಿಕ ಮಾತನಾಡಿದ ಮಂಜುನಾಥ್, ನಾನು ಎಂಟಿಬಿ ಅಭಿಮಾನಿ. ಅವರನ್ನು ನಂಬಿದರೆ ಪ್ರಾಣ ಹೋದರೂ ನಾವು ಚಿಂತೆ ಮಾಡಲ್ಲ. ಆ ಮಟ್ಟಕ್ಕೆ ಎಂಟಿಬಿ ಅವರು ಅಭಿಮಾನವನ್ನು ಹೊಸಕೋಟೆ ತಾಲೂಕಿನಲ್ಲಿ ಗಳಿಸಿಕೊಂಡಿದ್ದಾರೆ ಅನ್ನೋದಕ್ಕೆ ನಾನೇ ಸಾಕ್ಷಿ. ಹೊಸಕೋಟೆ ತಾಲೂಕಿನ ಜನರಲ್ಲಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಎಂಬಿಯವರು ಹೊಸಕೋಟೆಯನ್ನು ಅಭಿವೃದ್ಧಿ ಪಡಿಸಬೇಕು ಅನ್ನೋದಕ್ಕೋಸ್ಕರ ರಾಜೀನಾಮೆ ಕೊಟ್ಟಿದ್ದಾರೆಯೇ ಹೊರತು ಸ್ವಾರ್ಥಕ್ಕಾಗಿ ಅಲ್ಲ. ಅವರು ಯಾವ ಪಕ್ಷದವರಿಂದಲೂ ಹಣ ಪಡೆದುಕೊಂಡಿಲ್ಲ. ಅಭಿವೃದ್ಧಿ ವಿಚಾರ ಬಂದರೆ ಎಂಟಿಬಿ ನಾಗರಾಜಣ್ಣ ಅವರಿಗೆ ಯಾರೂ ಸರಿಸಮಾನರಲ್ಲ ಎಂದು ಹೇಳಿದ್ದಾರೆ.
ಇಂದು ಎಂಟಿಬಿ ರೋಡ್ ಶೋ ಹಿನ್ನೆಲೆಯಲ್ಲಿ ಹೊಸಕೋಟೆಯ ಎಂಟಿಬಿ ಕಚೇರಿಯಲ್ಲಿ ಕಾರ್ಯಕರ್ತರ ದಂಡೇ ನೆರೆದಿತ್ತು. ಹೊಸಕೋಟೆಯ ಮುಗಬಾಳ ಕಡೆಯಿಂದ ಬೈಕ್ ಗಳ ಮೂಲಕ ಆಗಮಿಸಿದ ಕಾರ್ಯಕರ್ತರು ಬೃಹತ್ ರ್ಯಾಲಿ ನಡೆಸಿದರು. ಹೊಸಕೋಟೆ ಐಬಿ ಸಮೀಪದಿಂದ ನಾಮಪತ್ರ ಸಲ್ಲಿಸುವ ತಾಲೂಕು ಕಚೇರಿವರೆಗೆ ರ್ಯಾಲಿ ನಡೆಯಿತು. ತೆರೆದ ವಾಹನದಲ್ಲಿ ಎಂಟಿಬಿಗೆ ಸಚಿವ ಆರ್.ಅಶೋಕ್, ಮಾಜಿ ಸಚಿವ ಕಟ್ಟ ಸುಬ್ರಮಣ್ಯ ನಾಯ್ಡು, ಕೋಲಾರ ಸಂಸದ ಮುನಿಸ್ವಾಮಿ ಮತ್ತಿತರರು ಸಾಥ್ ನಿಡಿದರು.
ರ್ಯಾಲಿಗೂ ಮುನ್ನ ಎಂಟಿಬಿ ತಮ್ಮ ಇಷ್ಟದೇವತೆ ಆಧಿಶಕ್ತಿ ಪಟಾಲಮ್ಮನಿಗೆ ಪೂಜೆ ಸಲ್ಲಿಸಿ ನಂತರ ತೆರಳಿದರು. ಪುತ್ರ ಹಾಗೂ ಸ್ಥಳಿಯ ನಾಯಕರ ಜೊತೆ ನಾಮಪತ್ರ ಸಲ್ಲಿಕೆಗೆ ತಾಲೂಕು ಕಚೇರಿ ಪ್ರವೇಶಿಸುತ್ತಿದ್ದಂತೆಯೇ ಗೇಟ್ ಬಳಿ ನೂಕು ನುಗ್ಗಲು ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಹೊರಗಡೆ ಮಂಜುನಾಥ್ ತನ್ನ ಎದೆಗೆ ಚಾಕು ಇರಿದುಕೊಂಡು ಆತಂಕ ಸೃಷ್ಟಿಸಿದ್ದಾನೆ.
ಎಂಟಿಬಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇಂದು ಯಾವುದೇ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ.