ಬೆಂಗಳೂರು: ಒಂದೆಡೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧನ ಮಾಡಿರುವುದನ್ನು ಖಂಡಿಸಿ ಒಕ್ಕಲಿಗರು ಪ್ರತಿಭಟನೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಬಿಜೆಪಿ ಸಪ್ತ ಸಮರ ಅಸ್ತ್ರ ಪ್ರಯೋಗ ಮಾಡುತ್ತಿದೆ.
ಹೌದು. ಡಿಕೆಶಿ ಇಡಿ ಅಧಿಕಾರಿಗಳಿಂದ ಬಂಧನವಾದ ಬಳಿಕ ನಡೆಯುತ್ತಿರುವ ಸಂಘರ್ಷಗಳು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಬಿಜೆಪಿ ಮತ್ತು ಕಾಂಗ್ರೆಸ್, ಜೆಡಿಎಸ್ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಡಿಕೆಶಿ ಬಂಧನ ಪ್ರಕರಣ ಈಗ ಜಾತಿ ಬಣ್ಣದ ತಿರುವು ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಕ್ಕಲಿಗ ಸಮುದಾಯವೇ ಬಿಜೆಪಿಯವರ ಟಾರ್ಗೆಟ್ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ಹೀಗಾಗಿ ಒಕ್ಕಲಿಗ ಸಮುದಾಯದವರಿಂದಲೇ ಬಿಜೆಪಿ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಲಿಕಾನ್ ಸಿಟಿಯಲ್ಲಿ ಲಕ್ಷಾಂತರ ಮಂದಿ ರೋಡಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ.
ಇತ್ತ ಪ್ರಕರಣಕ್ಕೆ ಜಾತಿ ಲೇಪನ ಸಿಕ್ಕ ಕೂಡಲೇ ಬಿಜೆಪಿ ಪಾಳಯ ಎಚ್ಚೆತ್ತುಕೊಂಡಿದ್ದು, ಒಕ್ಕಲಿಗ ಸಮುದಾಯದ ವಿರೋಧ ಬರದಂತೆ ತಡೆಯಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಇದಕ್ಕಾಗಿ ಕಮಲ ಪಾಳಯ ಸಪ್ತ ಸಮರ ಆರಂಭಿಸಿದೆ. ಈ ಮೂಲಕ ಮುಳ್ಳನ್ನು ಮುಳ್ಳಿಂದಲೇ ತೆಗೆಯಲು ಹೊರಟಿದೆ ಎನ್ನಲಾಗಿದೆ.
ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಂಸದರಾದ ಪ್ರತಾಪ್ ಸಿಂಹ, ಬಿ ಎನ್ ಬಚ್ಚೇಗೌಡ, ಡಿಸಿಎಂ ಅಶ್ವಥ್ ನಾರಾಯಣ, ಸಚಿವರಾದ ಆರ್ ಅಶೋಕ್ ಮತ್ತು ಸಿ ಟಿ ರವಿ ಈ ಏಳು ಮಂದಿ ಒಕ್ಕಲಿಗ ನಾಯಕರ ಮೂಲಕ ಜಾತಿ ಸಂಘರ್ಷ ಶಮನ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.
ಡಿಕೆಶಿ ಪ್ರಕರಣದಲ್ಲಿ ಭುಗಿಲೆದ್ದಿರುವ ಜಾತಿ ಜಟಾಪಟಿಯನ್ನು ಈ ಸಪ್ತ ನಾಯಕರು ಮಾತ್ರ ಟಾರ್ಗೆಟ್ ಮಾಡಬೇಕು. ಇವರನ್ನು ಬಿಟ್ಟು ಪಕ್ಷದ ಇತರೆ ಸಮಯದಾಯದ ನಾಯಕರು ಒಕ್ಕಲಿಗರ ಬಗ್ಗೆ ಮಾತಾಡಬಾರದು. ಒಕ್ಕಲಿಗ ಸಮಾಜದ ಮುಖಂಡರನ್ನು ಈ ಸಪ್ತ ಒಕ್ಕಲಿಗ ನಾಯಕರೇ ಟಾರ್ಗೆಟ್ ಮಾಡಬೇಕು. ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಈ ಸಂದಿಗ್ಧ ಪರಿಸ್ಥಿತಿ ನಿಭಾಯಿಸಬೇಕು. ಈ ಸಪ್ತ ನಾಯಕರೇ ಹೋರಾಟ ನಡೆಸಿ ಪಕ್ಷದ ಇಮೇಜ್ ಉಳಿಸಬೇಕು ಎಂದು ಬಿಜೆಪಿ ಹೈಕಮಾಂಡ್ ಸಪ್ತ ನಾಯಕರಿಗೆ ತಾಕೀತು ಮಾಡಿದೆ ಎಂಬುದಾಗಿ ತಿಳಿದುಬಂದಿದೆ.