ಬೆಂಗಳೂರು: ರಿಜ್ವಾನ್ಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ರೌಡಿಶೀಟರ್ ಒಬ್ಬ ಮನವಿ ಮಾಡಿದ್ದು, ಕಾಂಗ್ರೆಸ್ನಲ್ಲಿ ರೌಡಿ ಶೀಟರ್ ಗಳ ಅಬ್ಬರ ಜಾಸ್ತಿಯಾಗುತ್ತಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಹೌದು. ಇಂದು ಶಿವಾಜಿನಗರದ ರೌಡಿಶೀಟರ್ ಇಶ್ತಿಯಾಕ್ ಅಹ್ಮದ್ ಕೆಪಿಸಿಸಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದು, ರಿಜ್ವಾನ್ ಅರ್ಷದ್ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಅವರಿಗೆ ಮನವಿ ಮಾಡಿದ್ದಾನೆ. ಈಗ ಈ ಸುದ್ದಿ ಬಹಳಷ್ಟು ಚರ್ಚೆಯಾಗುತ್ತಿದ್ದು, ಶತಮಾನದ ಪಕ್ಷ ಕಾಂಗ್ರೆಸ್ ರೌಡಿ ಶೀಟರ್ ಗಳಿಗೆ ಮಣೆ ಹಾಕುತ್ತಿದ್ಯಾ ಎಂಬ ಅನುಮಾನಗಳು ಮೂಡುತ್ತೀವೆ.
ಇಶ್ತಿಯಾಕ್ ಕಾಂಗ್ರೆಸ್ ಕಚೇರಿಗೆ ಬರುವುದು ಇದು ಮೊದಲಲ್ಲ. ಎರಡು ವಾರದ ಹಿಂದೆಯೂ ಕೆಪಿಸಿಸಿ ಕಚೇರಿಗೆ ಇಶ್ತಿಯಾಕ್ ಅಹ್ಮದ್ ಬಂದಿದ್ದ. ಆಗ ಈ ವಿಚಾರದ ಬಗ್ಗೆ ಅಧ್ಯಕ್ಷರಾದ ದಿನೇಶ್ ಗೂಂಡುರಾವ್ ಅವರನ್ನು ಕೇಳಿದಾಗ, ರೌಡಿ ಶೀಟರ್ ಆಗಮನವನ್ನು ಸಮರ್ಥಿಸಿಕೊಂಡಿದ್ದು, ಯಾವ ಪಕ್ಷದಲ್ಲಿ ರೌಡಿ ಶೀಟರ್ ಇಲ್ಲ ಹೇಳಿ ಎಂದು ಮಾಧ್ಯಮಗಳ ಬಾಯಿ ಮುಚ್ಚಿಸಿದ್ದರು. ಪ್ರಮುಖ ನಾಯಕರೇ ರೌಡಿಗಳಿಗೆ ಮಣೆ ಹಾಕಿದರೆ ಮುಂದೇನು ಎಂದು ಕೈ ಕಾರ್ಯಕರ್ತರು ಈಗ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಕೆಪಿಸಿಸಿ ಅಧ್ಯಕ್ಷ ಕಚೇರಿಗೆ ಬಂದಿದ್ದ ರೌಡಿ ಇಶ್ತಿಯಾಕ್ ಅಹ್ಮದ್ ನಾನು ಹೇಳಿದ ರೀತಿಯಲ್ಲಿ ರಿಜ್ವಾನ್ ಅರ್ಷದ್ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಇಲ್ಲ ಎಂದರೆ ನಾನು ನಿಮ್ಮ ಪರ ಕೆಲಸ ಮಾಡಲ್ಲ ಎಂದು ಹೇಳಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಪದೇ ಪದೇ ಕಾಂಗ್ರೆಸ್ ಪಾಳ್ಯದಲ್ಲಿ ರೌಡಿ ಶೀಟರ್ ಕಾಣಿಸಿಕೊಳ್ಳುತ್ತಿದ್ದು, ಈ ವಿಚಾರದ ಬಗ್ಗೆ ರಾಜಕೀಯ ವಲಯದಲ್ಲಿ ಬಹಳ ಚರ್ಚೆಯಾಗುತ್ತದೆ.