ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮುಗಳಖೋಡ ಪುರಸಭಾ ಸದಸ್ಯೆ ಭಾಗವ್ವ ಶೇಗುಣಸಿ ಅಪಹರಣಕ್ಕೊಳಗಾದ ಮಹಿಳೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಶಿವಾನಂದ್ ಗೋಕಾಕ್ ಎಂಬವರು ನಮ್ಮ ತಾಯಿಯನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಭಾಗವ್ವ ಅವರ ಪುತ್ರ ಅಪ್ಪಾಸಾಬ ಶೇಗುಣಸಿ ಆರೋಪಿಸಿದ್ದಾರೆ. ಭಾಗವ್ವನ ಕುಟುಂಬಸ್ಥರೆಲ್ಲ ಶಿವಾನಂದ್ ಅವರ ಮನೆಮುಂದೆ ಧರಣಿ ಕುಳಿತಿದ್ದಾರೆ.
ಮುಗಳಖೋಡ ಪುರಸಭಾ ಸದಸ್ಯೆ ಭಾಗವ್ವ ಶೇಗುಣಸಿ ಮತ್ತು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ್ ಗೋಕಾಕ್ ಇಬ್ಬರೂ ಬಿಜೆಪಿ ಪಕ್ಷ ಸದಸ್ಯರೇ ಆಗಿದ್ದಾರೆ. ಭಾಗವ್ವ ಶೇಗುಣಸಿ ಕಾಂಗ್ರೆಸ್ ಪರ ಮತ ಚಲಾಯಿಸುವ ಒಲವು ತೋರಿದ್ದಾರೆ ಎಂದು ಅನುಮಾನ ಪಟ್ಟು ಶಿವಾನಂದ್ ಗೋಕಾಕ್ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಈಗ ಸದ್ಯ ಶಿವಾನಂದ್ ಗೋಕಾಕ್ ಅವರ ಮನೆ ಮುಂದೆ ನಮ್ಮ ತಾಯಿಯನ್ನ ಮರಳಿ ತನ್ನಿ ಎಂದು ಭಾಗವ್ವನ ಕುಟುಂಬಸ್ಥರ ಧರಣಿ ಮಾಡುತ್ತಿದ್ದಾರೆ.