ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 64ನೇ ಕನ್ನಡ ಹಬ್ಬ ರಂಗೇರಿದ್ದು, ಅಂಗವಿಕಲ ಕನ್ನಡ ಪ್ರೇಮಿಯೊಬ್ಬ ಕನ್ನಡ ಡಿಜೆ ಹಾಡಿಗೆ ಊರುಗೋಲು ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ.
ಹುಕ್ಕೇರಿ ತಾಲೂಕಿನ ಗುಟಗುದ್ದಿಯ ಅಶೋಕ್ ಕಳಸನ್ನ ಅವರು ಹುಟ್ಟು ಅಂಗವಿಕಲರಾಗಿದ್ದು, ಬಹುದೊಡ್ಡ ಕನ್ನಡ ಪ್ರೇಮಿಯಾಗಿದ್ದಾರೆ. ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಡಿಜೆ ಅಳವಡಿಕೆ ಮಾಡಲಾಗಿತ್ತು. ಇಲ್ಲಿ ಆಶೋಕ್ ಅವರು ಮಲ್ಲ ಚಿತ್ರದ ಹಾಡಿಗೆ ಊರುಗೋಲು ಹಿಡಿದು ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವವನ್ನ ಮಧ್ಯರಾತ್ರಿಯೇ ಆಚರಣೆ ಮಾಡುವ ಮೂಲಕ ಕುಂದಾನಗರಿಯಲ್ಲಿ ಕನ್ನಡಿಗರು ಸಂಭ್ರಮಿಸಿದ್ದಾರೆ. ನಗರದ ಚೆನ್ನಮ್ಮ ವೃತ್ತದಲ್ಲಿ ಸರಿಯಾಗಿ 12 ಗಂಟೆಗೆ ಕನ್ನಡಪರ ಸಂಘಟನೆ ಕಾರ್ಯಕರ್ತರೆಲ್ಲರೂ ಸೇರಿಕೊಂಡು ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಕನ್ನಡ ಹಬ್ಬ ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಪಟಾಕಿ ಸಿಡಿಸಿ, ಮಳೆಯಲ್ಲೇ ಕನ್ನಡ ಗೀತೆಗಳಿಗೆ ಸ್ಟೆಪ್ಸ್ ಹಾಕಿದರು. 2005ರ ನಂತರ ಮೊದಲ ಬಾರಿಗೆ ಡಿಸಿ ಕಚೇರಿ ಮುಂಭಾಗದಲ್ಲಿ ಕನ್ನಡದ ಧ್ವಜವನ್ನು ಹಾರಿಸುವುದರ ಮೂಲಕ ಖುಷಿ ಪಟ್ಟರು.
ಡಿಸಿ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣಕ್ಕೆ ಪೊಲೀಸರು ಕಾವಲಿದ್ದು, ಧ್ವಜಕ್ಕೆ ಧಕ್ಕೆಯಾಗದಂತೆ ನೋಡಿಕೊಂಡರು. ಮಧ್ಯರಾತ್ರಿ ಕನ್ನಡಿಗರೆಲ್ಲರೂ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದು, ಇಂದು ಇಡೀ ದಿನ ಕುಂದಾನಗರಿಯಲ್ಲಿ ಕನ್ನಡದ ಕಂಪು ಪಸರಿಸಲಿದೆ.