ಬೆಂಗಳೂರು: ಹೃದಯದಲ್ಲಿ ರಂಧ್ರವಾಗಿ ಓಡಾಡಲು ಆಗದೇ ಕಷ್ಟಪಡುತ್ತಿದ್ದ 13 ವರ್ಷದ ಪುಟ್ಟ ಹುಡುಗಿಯ ಮೊಗದಲ್ಲಿ ಈಗ ಬೆಳಕು ಮೂಡಿದೆ.
13 ವರ್ಷದ ಜ್ಯೋತಿ ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲುಗೇಟ್ ನಲ್ಲಿ ತಾಯಿ ಸೆಲ್ವಮ್ಮ ಜೊತೆ ವಾಸವಾಗಿದ್ದಾಳೆ. ಬಾಲಕಿಗೆ ತಂದೆ ಇಲ್ಲ, ಮನೆಕೆಲಸ ಮಾಡಿ ತಾಯಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲಾ ಮಕ್ಕಳಂತೆ ಶಾಲೆಗೆ ಹೋಗಿ ಆಟ ಆಡಿ ಪಾಠ ಕಲಿಯೋ ಆಸೆಯಾಗಿತ್ತು. ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರ ಇರೋದ್ರಿಂದ ಆಟ ಪಾಠಗಳಿಂದ ದೂರ ಉಳಿದು ಓಡಾಡಲು ಆಗದೇ ಬಾಲಕಿ ಕುಟುಂಬ ಕಣ್ಣೀರುಡುತ್ತಿತ್ತು.
ಹೃದಯ ಚಿಕಿತ್ಸೆಗೆ ನಾನಾ ಆಸ್ಪತ್ರೆಗೆ ಅಲೆದಾಡಿದರೂ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿಸಲು ಸೂಚಿಸಿದ್ದರೂ, ಬಾಲಕಿ ಉಳಿಯುವ ಭರವಸೆಯನ್ನು ನೀಡಿರಲಿಲ್ಲ. ಬಾಲಕಿ ಜ್ಯೋತಿ, ಅಮ್ಮ ನಾನು ಬದುಕಬೇಕು. ಓದಿ ನಿಮ್ಮನ್ನೆಲ್ಲಾ ಸಾಕಬೇಕು ಎಂದು ಕಣ್ಣೀರು ಹಾಕಿ ಹೇಳುವುದನ್ನು ಕಂಡು ತಾಯಿ ಜೀವನ ಮರುಗಿತ್ತು. ಮನೆಯಲ್ಲಿ ಕಡುಬಡತನವಿದ್ದು ವಯಸ್ಸಾದ ತಂದೆ ತಾಯಿಯನ್ನ ಸಾಕುತ್ತಿದ್ರು ಮಗಳ ವ್ಯಥೆಯನ್ನು ಕಂಡು ದಿನಾಲೂ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದ ಸೆಲ್ವಮ್ಮ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದು ಮಗಳ ಚಿಕಿತ್ಸೆಗೆ ಆಳಲು ತೋಡಿಕೊಂಡಿದ್ರು.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಾ ಇರೋ ಈ ಬಾಲಕಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯಾಗಿ ಎಲ್ಲಾ ಮಕ್ಕಳಂತಾಗಲಿ ಎನ್ನುವ ಉದ್ದೇಶದಿಂದ ಈಕೆಯ ನೋವಿನ ಕಥೆ ಪ್ರಸಾರವಾಗಿತ್ತು. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾದ ಸಿಎನ್ ಮಂಜುನಾಥ್ ಬಾಲಕಿಗೆ ಚಿಕಿತ್ಸೆ ನೀಡುವ ಭರವಸೆ ನೀಡಿದರು. ಅಂದು ಉಚಿತ ಶಸ್ತ್ರ ಚಿಕಿತ್ಸೆ ನೀಡುತ್ತೇವೆ ಎಂದು ಕೊಟ್ಟ ಮಾತಿನಂತೆ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ. ಈಗ ಬಾಲಕಿ ಜ್ಯೋತಿ ಆರೋಗ್ಯವಾಗಿದ್ದು ಎಲ್ಲಾ ಮಕ್ಕಳಂತೆ ಆಟ-ಪಾಠಗಳಲ್ಲಿ ತೊಡಗಲು ಚಿಕಿತ್ಸೆ ಯಶಸ್ವಿಯಾಗಿದೆ.
ಚಿಕಿತ್ಸೆ ಪಡೆದ ಬಾಲಕಿ ಜ್ಯೋತಿ ಖುಷಿಯಲ್ಲಿದ್ದು ವಿದ್ಯಾಭ್ಯಾಸ ಮುಂದುವರಿಸಿ ಮುಂದೆ ಡಾಕ್ಟರ್ ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು ಪಬ್ಲಿಕ್ ಟಿವಿಯ ಈ ಕಾರ್ಯಕ್ಕೆ ಧನ್ಯವಾದ ಹೇಳಿದ್ದಾಳೆ. ಮಗಳ ಚಿಕಿತ್ಸೆ ಯಶಸ್ವಿಯಾಗಿದ್ದು ತಾಯಿ ಸಂತಸಗೊಂಡಿದ್ದು, ಎಲ್ಲ ಮಕ್ಕಳಂತೆ ನನ್ನ ಮಗಳು ಓಡಾಡ್ತಾಳೆ, ಮಾತನಾಡುತ್ತಾಳೆ ಈ ಹಿಂದೆ ಇದ್ದ ಮಗಳಿಗಿಂತ ಈಗಿರೋ ಮಗಳನ್ನು ನೋಡಲು ಖುಷಿಯಾಗುತ್ತಿದೆ ಎನ್ನುತ್ತಾ ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ.
ಒಟ್ಟಾರೆ ಕಡು ಬಡತನದಲ್ಲಿದ್ದ ಈ ಬಾಲಕಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರು ಹಾಗೂ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ರವರಿಗೆ ಧನ್ಯವಾದ. ನೊಂದವರ ಬಾಳಿಗೆ ಬೆಳಕಾಗುವ ಕಾರ್ಯಕ್ರಮದ ಶ್ರಮಕ್ಕೆ ಪ್ರತಿಫಲ ದೊರೆತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=nzHgYXD2xno