ಚಿತ್ರದುರ್ಗ: ಆಹಾರವನ್ನು ಅರಸಿ ನಾಡಿಗೆ ಬಂದಿದ್ದ ಕರಡಿಯೊಂದು ಜನರಿಂದ ಗಾಬರಿಗೊಳಗಾಗಿ ಮರವೇರಿ ಕುಳಿತ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಬಳಿ ನಡೆದಿದೆ.
ಕರಡಿಯನ್ನು ಮರದಿಂದ ಕೆಳಗಿಳಿಸಲು ಕೋಲಿನಿಂದ ತಿವಿದು, ಬೆಂಕಿಯಿಟ್ಟು ಅರಣ್ಯಾಧಿಕಾರಿಗಳು ಅವೈಜ್ಞಾನಿಕವಾಗಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಕಾರಣವಾಗಿದೆ. ಭಾನುವಾರ ಮಧ್ಯಾಹ್ನ ಭರಮಸಾಗರದ ಅಜಾದ್ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಕರಡಿ ಜನರಲ್ಲಿ ಬಾರಿ ಆತಂಕ ಮೂಡಿಸಿತ್ತು.
ಇತ್ತ ಜನರನ್ನು ಕಂಡು ಕರಡಿ ಕೂಡ ಗಾಬರಿಗೊಂಡು ಮರವನ್ನು ಏರಿ ಕುಳಿತಿತ್ತು. ಕರಡಿಯನ್ನು ಗ್ರಾಮದಲ್ಲಿ ಕಂಡ ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಕರಡಿಯನ್ನು ಓಡಿಸಲು ಕೋಲಿನಿಂದ ತಿವಿದು, ಬೆಂಕಿಯಿಟ್ಟು ಅವೈಜ್ಞಾನಿಕವಾಗಿ ತಡರಾತ್ರಿಯವರೆಗೆ ಕಾರ್ಯಾಚರಣೆ ಮಾಡಿದ್ದಾರೆ. ಇದರಿಂದಾಗಿ ಇನ್ನೂ ಗಾಬರಿಗೊಳಗಾದ ಕರಡಿಯು ಮರದಿಂದ ಕೆಳಗೆ ಇಳಿಯಲಿಲ್ಲ. ಅಲ್ಲದೇ ಕೊನೆಗೆ ಮಧ್ಯಾಹ್ನದಿಂದ ತಡರಾತ್ರಿವರೆಗೆ ಕಾಲಹರಣ ಮಾಡಿದ್ದ ಅರಣ್ಯಾಧಿಕಾರಿಗಳು ಅಲ್ಲಿಂದ ವಾಪಸ್ ತೆರೆಳಿದ್ದರು.
ಕೊನೆಗೆ ಬೆಳಗಿನ ಜಾವ ಕರಡಿ ತನ್ನಷ್ಟಕ್ಕೆ ತಾನು ಮರದಿಂದ ಕೆಳಗೆ ಇಳಿದು ಬದುಕಿಕೊಂಡಿತು ಬಡಜೀವ ಅಂತ ಓಡಿ ಹೋಗಿದೆ. ಆದರೆ ಅದೃಷ್ಟವಶಾತ್ ಜನರಿಗಾಗಲಿ, ಕರಡಿಗಾಗಲಿ ಯಾವುದೇ ಅಪಾಯವಾಗಿಲ್ಲ. ಇತ್ತೀಚೆಗೆ ಕೋಟೆನಾಡಲ್ಲಿ ಕಾಡುಪ್ರಾಣಿಗಳಾದ ಕರಡಿ ಹಾಗೂ ಚಿರತೆ ಆಹಾರ ಹರಸಿ ನಾಡಿನತ್ತ ಬರುತ್ತಿರುವುದು ಹೆಚ್ಚಾಗುತ್ತಿದೆ. ಆದರೆ ಈವರೆಗೆ ಆ ಪ್ರಾಣಿಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡುವ ವೈಜ್ಞಾನಿಕ ಪದ್ಧತಿಯನ್ನು ಮಾತ್ರ ಅರಣ್ಯ ಇಲಾಖೆ ಅನುಸರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಹೀಗಾಗಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ನಡೆ ವಿರುದ್ಧ ಸ್ಥಳೀಯರು ಮತ್ತು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.