ಭಾಷೆಯ ಗಡಿ ಎಂಬ ಎಲ್ಲೆಯನ್ನು ಮೀರಿದ್ದು ಸಿನಿಮಾ. ಅದಕ್ಕೆ ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಉತ್ತರ ಕರ್ನಾಟಕ ಕನ್ನಡ ಎಂಬ ಭೇದ ಭಾವವಿಲ್ಲ. ಅದರ ಉದ್ದೇಶ ಒಂದೇ ಮನರಂಜನೆ. ಇದೀಗ ಅದೇ ಮನರಂಜನೆ ಉದ್ದೇಶ ಇಟ್ಟುಕೊಂಡು ಬಂದ ಸಿನಿಮಾವೊಂದು ಉತ್ತರ ಕರ್ನಾಟಕದ ಜವಾರಿ ಭಾಷೆಯ ಘಮವನ್ನು ಪಸರಿಸೋಕೆ ರೆಡಿಯಾಗಿದೆ. ಆ ಚಿತ್ರದ ಹೆಸರೇ ‘ಬಯಲುಸೀಮೆ’.
‘ಬಯಲುಸೀಮೆ’ ಹೆಸರೇ ಹೇಳುವಂತೆ ಪಕ್ಕಾ ಉತ್ತರ ಕರ್ನಾಟಕ ಸೊಗಡಿರುವ ಚಿತ್ರ. ರಗಡ್ ಕಥೆ ಈ ಚಿತ್ರದ ಜೀವಾಳ. ಪೊಲಿಟಿಕಲ್ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರದ ಕಥಾವಸ್ತು. ಸದ್ಯಕ್ಕಂತು ಸದ್ದಿಲ್ಲದೇ ಸೆಟ್ಟೇರಿ ಸಂಪೂರ್ಣ ಚಿತ್ರೀಕರಣವನ್ನೂ ಮುಗಿಸಿ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ಇದನ್ನೂ ಓದಿ: ಪತಿ ಸೈಫ್ ಜೊತೆ ಮಾಲ್ಡೀವ್ಸ್ನಲ್ಲಿ ಕರೀನಾ ಬರ್ತ್ಡೇ ಸೆಲೆಬ್ರೇಷನ್
ಮೊದಲೇ ಹೇಳಿದಂತೆ ಇದು ಸಂಪೂರ್ಣವಾಗಿ ಉತ್ತರ ಕರ್ನಾಟಕ ಶೈಲಿಯಲ್ಲೇ ತಯಾರಾಗಿರುವ ಚಿತ್ರ. ಇಲ್ಲಿ ಜವಾರಿ ಭಾಷೆಯ ಸವಿಯನ್ನೂ ಸವಿಯಬಹುದು. 80ರ ದಶಕ ಹಾಗೂ ಈಗಿನ ಕಾಲಮಾನವನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರೆ ಚಿತ್ರದ ಸೂತ್ರಧಾರ ವರುಣ್ ಕಟ್ಟೀಮನಿ. ಸಾಹೂರಾವ್ ಶಿಂಧೆ ಎಂಬ ಶ್ರೀಮಂತ ವ್ಯಕ್ತಿ ಚಿತ್ರದ ಕಥಾ ನಾಯಕ. ಆತನ ಸುತ್ತ ಹಬ್ಬಿಕೊಳ್ಳುವ ಅಕ್ರಮ ಸಂಬಂಧ, ಅದರ ಹಿನ್ನೆಲೆಯಲ್ಲೊಂದು ಲವ್ ಸ್ಟೋರಿ ಹಾಗೂ ದ್ವೇಷ ‘ಬಯಲುಸೀಮೆ’ ಚಿತ್ರದ ಒನ್ ಲೈನ್ ಕಹಾನಿ. ಕಥೆಗೆ ತಕ್ಕಂತೆ ಸಾಕಷ್ಟು ಟ್ವಿಸ್ಟ್ ಟರ್ನ್ ಗಳು ಚಿತ್ರದಲ್ಲಿದ್ದು, ಪ್ರೇಕ್ಷಕ ಪ್ರಭುಗಳ ಮೈಜುಮ್ಮೆನ್ನಿಸದೇ ಇರದು ಎನ್ನುವುದು ನಿರ್ದೇಶಕ ವರುಣ್ ಕಟ್ಟೀಮನಿ ಮಾತುಗಳು.
ಲಕ್ಷಣ್ ಸಾ ಶಿಂಗ್ರಿ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಟಿ.ಎಸ್.ನಾಗಾಭರಣ, ರವಿಶಂಕರ್, ಸಂಯುಕ್ತ ಹೊರನಾಡು, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕೈನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.