ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಮತ್ತೆ ಬಂಡಾಯದ ಕಹಳೆ ಮೊಳಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಪಕ್ಷದ ಹಿರಿಯ ಮುಖಂಡ, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ಮೇಲೆ ಕುಮಾರಸ್ವಾಮಿಗೆ ಸರ್ಕಾರ ಇದ್ದಾಗ ಇದ್ದ ಕಾಳಜಿ ಈಗಿಲ್ಲ. ನಮ್ಮ ಸಮಸ್ಯೆ ಕೇಳೋರು ಕೂಡ ಯಾರು ಇಲ್ಲ, ವರಿಷ್ಠರು ಕೂಡ ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ನಿನ್ನೆ ನಮ್ಮೆಲ್ಲಾ ಪಕ್ಷದ ಸದಸ್ಯರು ಒಂದು ಸಭೆ ಮಾಡಿದ್ದೇವೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಮತ್ತೆ ಸೋಮವಾರ ಸಭೆ ಕರೆದಿದ್ದು, ಮುಂದಿನ ತೀರ್ಮಾನ ತೆಗೆದುಕೊಳ್ತೇವೆ ಎಂದರು.
ಇದೇ ವೇಳೆ ಪಕ್ಷ ಬಿಡುವ ಬಗ್ಗೆ ಆಲೋಚನೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಇದೆ ರೀತಿ ವರ್ತನೆ ಮುಂದುವರಿದರೆ ಕಷ್ಟ. ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡಿದರು.
ನೆರೆ ಕುರಿತ ಸರ್ಕಾರದ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರ ತೃಪ್ತಿ ತಂದಿದೆ. ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟಿದ್ದಾರೆ. ಸರ್ಕಾರ ಕೂಡ ಪರಿಹಾರ ಕಾರ್ಯಗಳನ್ನು ಸಮರ್ಥವಾಗಿ ಮಾಡಿದೆ. ಆದರೆ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಬಗ್ಗೆ ಅವರು ಹೇಳಿಲ್ಲ. ಅದಕ್ಕಾಗಿ ಕಾಂಗ್ರೆಸ್ ಪಕ್ಷದವರು ಧರಣಿ ಮಾಡಿದರು. ಆದರೆ ನಾವು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಅವರು ಉತ್ತರ ಕೊಟ್ಟಿದ್ದರು. ಆದ್ದರಿಂದಲೇ ನಾವು ಸದನದಲ್ಲಿ ಹೋರಾಟ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬಲಿ ಪಶು ಆಗುವಂತಾಯಿತು. ಇದಕ್ಕೆ ಉದಾಹರಣೆ ಈ ರಮೇಶ್ ಆತ್ಮಹತ್ಯೆ. ಹೀಗಾಗಿ ಮುಂದೆ ಆದರೂ ರಾಜಕಾರಣಿಗಳ ಪಿಎಗಳು, ಪಿಎಸ್ ಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.