ಮಂಡ್ಯ: ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು.
ಹಾಸನದಲ್ಲಿ ನಡೆದ ಭೀಕರ ರಸ್ತೆ ಅಫಘಾತಕ್ಕೆ ಪ್ರತಿಕ್ರಿಯಿಸಿದ ಅವರು, ಘಟನೆ ದುರಾದೃಷ್ಟಕರ ಎಂದ ಅವರು ಸಂತಾಪವನ್ನು ಸೂಚಿಸಿದರು. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಉಸ್ತುವಾರಿ ಸಚಿವರು ಕುಂಭಮೇಳ ಸಮಾರೋಪ ಮುಗಿಸಿ ಹಾಸನಕ್ಕೆ ತೆರಳಿ ಪರಿಸ್ಥಿತಿ ನಿರ್ವಹಣೆ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಕಾಸಿದ್ದವರಿಗೆ ಮಾತ್ರ ಕರ್ನಾಟಕದಲ್ಲಿ ಪದವಿ ಎಂಬ ರಾಹುಲ್ ಗಾಂಧಿ (Rahul Gandhi) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ, ಕಾನ್ಸ್ಟೇಬಲ್ ನೇಮಕಾತಿ ಅಕ್ರಮ ಸೇರಿ ಹಲವು ಹಗರಣಗಳ ಬಗ್ಗೆ ದಾಖಲಾತಿ ಸಂಗ್ರಹಿಸಲಾಗಿದೆ. ಎಲ್ಲಾ ದಾಖಲಾತಿಗಳನ್ನ ರಾಹುಲ್ ಗಾಂಧಿಗೆ ಕಳುಹಿಸಿಕೊಡುತ್ತೇನೆ. ಇದೆಲ್ಲದರ ಬಗ್ಗೆ ತನಿಖೆ ಮುಂದುವರಿದಿದೆ. ಅದನ್ನ ನೋಡಿ ರಾಹುಲ್ ಗಾಂಧಿ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬರುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಹೇಳಿದ್ದು ಯಾವುದೂ ನಿಜವಾಗಿಲ್ಲ. ಕಳೆದ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೀವಿ ಎಂದರು. ಆದರೆ 79 ಸೀಟ್ಗೆ ನಿಂತೋದ್ರು. ಅವ್ರಪ್ರಾಣೆ ಯಡಿಯೂರಪ್ಪ ಸಿಎಂ ಆಗಲ್ಲಾ ಎಂದರು. ಆದರೆ ಒಂದೇ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಹೀಗಾಗಿ ಸಿದ್ದರಾಮಯ್ಯ ಹೇಳುವುದು ಯಾವುದು ನಿಜವಾಗಲ್ಲ ಎಂದು ವ್ಯಂಗ್ಯವಾಡಿದರು.