ಬೆಂಗಳೂರು: ಇಂದು ನಿಧನರಾಗಿರುವ ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ಬಪ್ಪಿ ಲಹರಿ ಅವರಿಗೂ ಕನ್ನಡ ಸಿನಿಮಾ ರಂಗಕ್ಕೂ ನಂಟಿದೆ. ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳ ಹಾಡುಗಳಿಗೆ ದನಿ ಆಗಿರುವ ಬಪ್ಪಿ, ನೇರವಾಗಿ ಕನ್ನಡ ಸಿನಿಮಾದಲ್ಲಿ ಹಾಡದಿದ್ದರೂ, ಅವರು ಸಂಗೀತ ಸಂಯೋಜನೆ ಮಾಡಿರುವ ಹಾಡೊಂದನ್ನು ಕನ್ನಡ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕನ್ನಡದ ಹೆಸರಾಂತ ನಟ ವಿಷ್ಣುವರ್ಧನ್ ನಟನೆಯ ಕರ್ಣ ಸಿನಿಮಾದಲ್ಲಿ ಎನ್ನುವುದು ವಿಶೇಷ.
ವಿಷ್ಣುವರ್ಧನ್ ಮತ್ತು ಸುಮಲತಾ ಅಂಬರೀಶ್ ಕಾಂಬಿನೇಷನ್ ನ ಈ ಸಿನಿಮಾದಲ್ಲಿ ‘ಆ ಕರ್ಣನಂತೆ’, ‘ಪ್ರೀತಿಯೇ ನನ್ನುಸಿರು’ ಸೇರಿದಂತೆ ಐದು ಹಾಡುಗಳಿವೆ. ಎಂ.ರಂಗರಾವ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಈ ಐದು ಹಾಡುಗಳಲ್ಲಿ ಅತೀ ಹೆಚ್ಚು ಜನಪ್ರಿಯವಾಗಿದ್ದು ‘ಪ್ರೀತಿಯೇ ನನ್ನುಸಿರು’ ಗೀತೆ. ಇದು ಮೂಲ ಹಿಂದಿಯ ಸಿನಿಮಾದಿಂದ ಎರವಲು ಪಡೆದದ್ದು. ಇದನ್ನೂ ಓದಿ: ಬಪ್ಪಿ ಲಹರಿ ಧರಿಸುತ್ತಿದ್ದ ಚಿನ್ನಾಭರಣ ಎಷ್ಟು?
1985ರಲ್ಲಿ ತೆರೆಕಂಡ ಹಿಂದಿಯ ಚಿತ್ರ ‘ಸಾಹೇಬ್’ ಸಿನಿಮಾದ ‘ಯಾರ ಬಿನಾ ಚೈನ್ ಕಹನ್ ರೇ’ ಹಾಡನ್ನು ಕಂಪೋಸ್ ಮಾಡಿದ್ದು ಬಪ್ಪಿ ಲಹರಿ. ಇದೊಂದು ರೆಟ್ರೋ ಶೈಲಿಯ ಗೀತೆಯಾಗಿತ್ತು. ಅನಿಲ್ ಕಪೂರ್ ಮತ್ತು ಅರ್ಮಿತ್ ಸಿಂಗ್ ಅವರ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಈ ಮೂಲ ಹಾಡನ್ನೇ ಕನ್ನಡದಲ್ಲಿ ‘ಕರ್ಣ’ ಚಿತ್ರಕ್ಕಾಗಿ ಎಂ.ರಂಗರಾವ್ ಅವರು ಬಳಸಿಕೊಂಡು ‘ಪ್ರೀತಿಯೇ ನನ್ನುಸಿರು’ ಹಾಡು ಮಾಡಿದರು. ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ ಅವರು ಈ ಗೀತೆಗೆ ದನಿಯಾದರು. ಇದನ್ನೂ ಓದಿ: ಹಿರಿಯ ಗಾಯಕ ಬಪ್ಪಿ ಲಹರಿ ಇನ್ನಿಲ್ಲ