ಢಾಕಾ: ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ (Chief Justice of Bangladesh) ರಾಜೀನಾಮೆಗೆ ಆಗ್ರಹಿಸಿ ನ್ಯಾಯಾಲಯದ ಸುತ್ತ ಪ್ರತಿಭಟನಾಕಾರರು ತೀವ್ರ ಪ್ರತಿಭಟನೆ ನಡೆಸಿದ ಬಳಿಕ ಸಿಜೆಬಿ ಒಬೈದುಲ್ ಹಸನ್ ಅವರು ರಾಜೀನಾಮೆ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸುಪ್ರೀಂ ಕೋರ್ಟ್ನ (Supreme Court) ಎರಡೂ ವಿಭಾಗಗಳ ಎಲ್ಲಾ ನ್ಯಾಯಮೂರ್ತಿಗಳೊಂದಿಗೆ ಪೂರ್ಣ ನ್ಯಾಯಾಲಯದ ಸಭೆಗೆ ಹಸನ್ ಕರೆ ನೀಡಿದ ನಂತರ ಪ್ರತಿಭಟನೆಗಳು ಪ್ರಾರಂಭವಾದವು. ಪ್ರತಿಭಟನಾನಿರತ ವಿದ್ಯಾರ್ಥಿಗಳು ಫುಲ್ ಕೋರ್ಟ್ ಸಭೆ ಕರೆಯುವುದನ್ನು ನ್ಯಾಯಾಂಗ ಧಂಗೆ ಎಂದು ಪರಿಗಣಿಸಿ ಹೈಕೋರ್ಟ್ ಆವರಣಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಹಸನ್ ಸಭೆಯನ್ನು ಮುಂದೂಡಿ, ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರನ್ನು ಸಂಪರ್ಕಿಸಿದ ಬಳಿಕ ನ್ಯಾಯಾಧೀಶರು ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.
ಇದರ ನಡುವೆ ದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಅನೇಕ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ವಾಯುವ್ಯ ಬಾಂಗ್ಲಾದೇಶದಲ್ಲಿ ನೂರಾರು ಜನರು ನೆರೆಯ ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದ ಹಂಗಾಮಿ ನಾಯಕ ಮೊಹಮ್ಮದ್ ಯೂನಸ್ ಅವರು ಧಾರ್ಮಿಕ ಏಕತೆಗಾಗಿ ಮನವಿ ಮಾಡಿದ್ದಾರೆ.