ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ರಾಬರಿ ಮಾಡುತ್ತಿದ್ದ ನಾಲ್ವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂದೀಪ್, ಅನುಕುಮಾರ್, ಮನುಕುಮಾರ್ ಬಂಧಿತ ಆರೋಪಿಗಳು. ತಂಡದಲ್ಲಿ ಓರ್ವ ಬಾಲಾಪರಾಧಿ ಇದ್ದಾನೆ. ರಾತ್ರಿ ಸಮಯದಲ್ಲಿ ಡ್ರಾಪ್ ಮಾಡುವ ನೆಪದಲ್ಲಿ ವಾಹನ ಹತ್ತಿಸಿಕೊಂಡು ಯಾರು ಇಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸಿ ಲಾಂಗ್ ಮಚ್ಚುಗಳನ್ನು ತೋರಿಸಿ ರಾಬರಿ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನವೆಂಬರ್ 4 ರಂದು ಗಂಗಾಧರಯ್ಯ ಎಂಬುವವರನ್ನು ಗೊರಗುಂಟೆಪಾಳ್ಯದಿಂದ ನಾಗರಭಾವಿ ಕಡೆಗೆ ತಲುಪಿಸುವುದಾಗಿ ಹೇಳಿ ತಮ್ಮ ಟಿಟಿ ವಾಹನ ಹತ್ತಿಸಿಕೊಂಡ ಈ ನಾಲ್ವರು. ನಂತರ ಯಾರು ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಲಾಂಗು ಮಚ್ಚು ತೋರಿಸಿ ಗಂಗಾಧರಯ್ಯ ಬಳಿ ಇದ್ದ ಚಿನ್ನಾಭರಣ ದೋಚಿದ್ದರು. ಈ ಸಂಬಂಧ ಗಂಗಾಧರಯ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.