ಕನ್ನಡಿಗ, ದಕ್ಷಿಣ ಭಾರತದ ಹೆಸರಾಂತ ನಟ ಅರ್ಜುನ್ ಸರ್ಜಾ (Arjun Sarja) ಅವರು ತಮ್ಮ ಪುತ್ರಿ ಐಶ್ವರ್ಯ ಸರ್ಜಾ ಅವರ ಮದುವೆ (Marriage) ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ತಮಿಳು ಚಿತ್ರೋದ್ಯಮದಲ್ಲಿ ಕೇಳಿ ಬಂದಿತ್ತು. ಅದೀಗ ನಿಜವಾಗಿದೆ. ತಮ್ಮ ಮಗನ ಜೊತೆ ಐಶ್ವರ್ಯರ ಮದುವೆ ಆಗುತ್ತಿರುವುದು ನಿಜ ಎಂದು ಹುಡುಗನ ತಂದೆಯೇ ಅಧಿಕೃತ ಹೇಳಿಕೆ ನೀಡಿದ್ದಾರೆ.
ಪ್ರೇಮ ಬರಹ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ತಮ್ಮ ಪುತ್ರಿ ಐಶ್ವರ್ಯ (Aishwarya Sarja) ಅವರನ್ನು ಪರಿಚಯ ಮಾಡಿಕೊಟ್ಟಿದ್ದರು ಅರ್ಜುನ್ ಸರ್ಜಾ. ಈ ಸಿನಿಮಾವನ್ನು ತಾವೇ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿದ್ದರು. ಅದು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಹೇಳಿಕೊಳ್ಳುವಂತೆ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲಲಿಲ್ಲ. ಆನಂತರ ಐಶ್ವರ್ಯ ಸಿನಿಮಾ ರಂಗದಲ್ಲಿ ಅಷ್ಟೇನೂ ಸಕ್ರೀಯರಾಗಲಿಲ್ಲ. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?
ಇದೀಗ ತಮ್ಮ ಪುತ್ರಿಯನ್ನು ತಮಿಳಿನ ಖ್ಯಾತ ಹಾಸ್ಯ ನಟ ತಂಬಿ ರಾಮಯ್ಯ (Thambi Ramaiah) ಅವರ ಪುತ್ರ ಉಮಾಪತಿ ರಾಮಯ್ಯ (Umapati Ramaiah) ಜೊತೆ ಮದುವೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಹಾಗಂತ ತಮಿಳು ಮಾಧ್ಯಮಗಳು ಸುದ್ದಿ ಮಾಡಿದ್ದವು. ಒಂದು ಮೂಲದ ಪ್ರಕಾರ ಉಮಾಪತಿ ಮತ್ತು ಐಶ್ವರ್ಯ ಹಲವು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದೂ ಹೇಳಲಾಗಿತ್ತು. ಮದುವೆಗೆ ಎರಡೂ ಮನೆಯ ಒಪ್ಪಿಗೆಯೂ ಇದೆ ಎಂದು ಹೇಳಲಾಗಿತ್ತು. ಈಗ ಎಲ್ಲವೂ ನಿಜ ಎಂದು ತಂಬಿ ರಾಮಯ್ಯ ತಿಳಿಸಿದ್ದಾರೆ.
ನನ್ನ ಮಗನ ಜೊತೆ ಐಶ್ವರ್ಯ ಅವರ ಮದುವೆ ಆಗುತ್ತಿರುವುದು ನಿಜ. ಇಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟಿದ್ದಾರೆ. ಒಪ್ಪಿಕೊಂಡಿದ್ದಾರೆ. ಮದುವೆ ದಿನಾಂಕವನ್ನು ಗೊತ್ತು ಪಡಿಸಬೇಕಿದೆ. ಜನವರಿಯಲ್ಲಿ ಮದುವೆ ಮಾಡಲು ನಿಶ್ಚಿಯ ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ತಂಬಿ ರಾಮಯ್ಯ ತಿಳಿಸಿದ್ದಾರೆ.
ತಂಬಿ ರಾಮಯ್ಯ ತಮಿಳಿನ ಸುಪ್ರಸಿದ್ದ ಹಾಸ್ಯ ನಟರು. ರಾಷ್ಟ್ರ ಪ್ರಶಸ್ತಿ ವಿಜೇತರು ನಟರು. ಇವರ ಪುತ್ರ ಉಮಾಪತಿ ರಾಮಯ್ಯ ಕೂಡ ನಟರಾಗಿ 2017ರಲ್ಲೇ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಆದರೆ, ಅವರಿಗೂ ಇನ್ನೂ ಬ್ರೇಕ್ ಎನ್ನುವಂತಹ ಸಿನಿಮಾ ಬಂದಿಲ್ಲ. ದೇವದಾಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಉಮಾಪತಿ ನಟಿಸಿದ್ದಾರೆ.