ಚೆನ್ನೈ: ತಮಿಳುನಾಡಿನ 2026ರ ವಿಧಾನಸಭಾ ಸಮರದಲ್ಲಿ (Tamil Nadu Election) ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಹಳೆ ಹುಲಿಗಳ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ದಶಕಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ನಡುವೆ ಸುತ್ತುತ್ತಿದ್ದ ತಮಿಳು ರಾಜಕಾರಣದಲ್ಲಿ ವಿಜಯ್ ಈಗ ‘ಕಿಂಗ್’ ಆಗಿ ಉದಯಿಸಿದ್ದಾರೆ. ಯುವಶಕ್ತಿ ಮತ್ತು ಮಹಿಳೆಯರ ಅಭೂತಪೂರ್ವ ಬೆಂಬಲವೇ ಈ ಐತಿಹಾಸಿಕ ಬದಲಾವಣೆಗೆ ಕಾರಣ ಎನ್ನಲಾಗಿದೆ.
ತಮಿಳುನಾಡಿನ ಸುಮಾರು 2.38 ಕೋಟಿ ಯುವ ಮತದಾರರು ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಮೇಲಿನ ಅಸಮಾಧಾನದಿಂದಾಗಿ ಹೊಸ ಪರ್ಯಾಯವನ್ನು ಹುಡುಕುತ್ತಿದ್ದರು. ವಿಜಯ್ ಅವರಲ್ಲಿ ಹೊಸ ಭರವಸೆ ಕಂಡ ಈ ಯುವ ಸಮೂಹ, ಅವರ ‘ವಿಜಯ್ ಮಕ್ಕಳ ಇಯಕ್ಕಂ’ ಸಂಘಟನೆಯನ್ನು ಶಕ್ತಿಯುತ ಮತ ಬ್ಯಾಂಕ್ ಆಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ.
ಟಿವಿಕೆ ಪಕ್ಷದ ಪ್ರಣಾಳಿಕೆಯಲ್ಲಿದ್ದ ಮಹಿಳಾ ಕೇಂದ್ರಿತ ಯೋಜನೆಗಳು ಡಿಎಂಕೆಗೆ ತೀವ್ರ ಪೆಟ್ಟು ನೀಡಿವೆ. ಗೃಹಿಣಿಯರಿಗೆ ಮಾಸಿಕ ಹಣಕಾಸಿನ ನೆರವನ್ನು 2,500 ರೂ.ಗೆ ಏರಿಸುವ ಭರವಸೆ, ಪ್ರತಿ ಮನೆಗೂ ಉಚಿತ ಎಲ್ಪಿಜಿ ಸಿಲಿಂಡರ್ ಯೋಜನೆ. ಈ ಎರಡು ಅಂಶಗಳು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ‘ಗೇಮ್ ಚೇಂಜರ್’ ಆಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತಮಿಳುನಾಡಲ್ಲಿ ಟಿವಿಕೆಗೆ ಮುನ್ನಡೆ – ವಿಜಯ್ಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ
ವಿದ್ಯಾರ್ಥಿಗಳಿಗಾಗಿ 25 ಲಕ್ಷ ರೂ.ವರೆಗೆ ಅಡಮಾನ ರಹಿತ ಶೈಕ್ಷಣಿಕ ಸಾಲದ ಭರವಸೆ. ಮೀನುಗಾರರಿಗೆ ಕನಿಷ್ಠ ಬೆಂಬಲ ಬೆಲೆ (MSP) ಘೋಷಣೆ. ವ್ಯವಸ್ಥಿತ ಭ್ರಷ್ಟಾಚಾರದ ವಿರುದ್ಧ ವಿಜಯ್ ನೀಡಿದ ಕರೆಯು ಮಧ್ಯಮ ವರ್ಗದ ಜನರನ್ನು ಆಕರ್ಷಿಸಿತ್ತು.
ವಿಜಯ್ ಕೇವಲ ಸಿನಿಮೀಯ ಶೈಲಿಯಲ್ಲಿ ಪ್ರಚಾರ ಮಾಡದೆ, ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರು. ರಾಜ್ಯಾದ್ಯಂತ ಸುಮಾರು 69,000 ಬೂತ್ ಏಜೆಂಟ್ಗಳನ್ನು ನೇಮಿಸಿ, ಬಲಿಷ್ಠ ಐಟಿ ವಿಭಾಗದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಲೆ ಸೃಷ್ಟಿಸಿದ್ದು ಈ ಬಾರಿ ಡಿಎಂಕೆ ಪಲ್ಟಿ ಹೊಡೆಯಲು ಪ್ರಮುಖ ಕಾರಣವಾಗಿದೆ.
ದ್ರಾವಿಡ ರಾಜಕಾರಣದ ದ್ವಿಪಕ್ಷೀಯ ಯುಗಕ್ಕೆ ಅಂತ್ಯಹಾಡಿರುವ ವಿಜಯ್, ತಮಿಳುನಾಡಿನ ಜನಸಾಮಾನ್ಯರ ಧ್ವನಿಯಾಗಿ ಮೂಡಿಬಂದಿದ್ದಾರೆ. ಆಡಳಿತ ವಿರೋಧಿ ಅಲೆ ಮತ್ತು ತಮ್ಮ ಪ್ರಭಾವಿ ವ್ಯಕ್ತಿತ್ವದ ಸಮಾಗಮದಿಂದ ವಿಜಯ್ ಈಗ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

