ಹಾವೇರಿ: ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೋ ಗಾದೆ ಮಾತಿದೆ. ಅದಕ್ಕೆ ತಕ್ಕಂತೆ ಇದೆ ಈ ಸ್ಟೋರಿ. ಬಡ ಗರ್ಭಿಣಿಯರಿಗೆ, ಮಕ್ಕಳಿಗೆ ಎಂದು ಸರ್ಕಾರವೇನೋ ಪೌಷ್ಠಿಕ ಆಹಾರ ನೀಡುವ ಯೋಜನೆ ತಂದಿದೆ. ಆದರೆ ಆ ಆಹಾರವೆಲ್ಲಾ ಈಗ ಹುಳು ಹಿಡಿದಿದೆ.
ಬೂಸ್ಟ್ ಹಿಡಿದಿರೋ ಶೇಂಗಾ, ಹುಳುಗಳೇ ತುಂಬಿರೋ ರವೆ, ಹಾಳಾಗಿರೋ ಬೆಲ್ಲ, ಹಾಲಿನ ಪುಡಿ. ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಡಲ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಪ್ಲಾಟ್, ಅಗಡಿ ಮರಳೀಹಳ್ಳಿ ಗ್ರಾಮಗಳಲ್ಲಿ.
ಗರ್ಭಿಣಿಯರು ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಈ ಸಾಮಗ್ರಿಗಳನ್ನು ನೀಡುತ್ತದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಆಹಾರ ಪದಾರ್ಥಗಳು ಹುಳು ಹಿಡಿದು ಹೋಗುತ್ತಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಮಾಲತೇಶ ಸೊಪ್ಪಿನ ಅನ್ನೋರು ಆಹಾರ ಪದಾರ್ಥಗಳು ಕೊಳೆಯುತ್ತಿರೋದನ್ನು ಪ್ರದರ್ಶಿಸಿದರು.
ಅಂಗನವಾಡಿಗಳಲ್ಲಿ ಆಹಾರ ಪದಾರ್ಥಗಳು ಹಾಳಾಗಿರೋದು ಮಾಧ್ಯಮಗಳ ಮೂಲಕ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಒಟ್ನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಹಾಗೆ, ಸರ್ಕಾರ ಕೊಟ್ಟರೂ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಡ ಗರ್ಭಿಣಿಯರು, ಮಕ್ಕಳ ಹೊಟ್ಟೆ ಸೇರಬೇಕಾದ ಆಹಾರ ಪದಾರ್ಥ ಹುಳುಗಳ ಪಾಲಾಗಿರೋದು ದುರಂತವೇ ಸರಿ.