– ಆನಂದ್ ಸಿಂಗ್ ಮೇಲೆ ಹಲ್ಲೆಗೈದು ಕೊಲೆ ಬೆದರಿಕೆ
– ಕಂಪ್ಲಿ ಶಾಸಕ ಗಣೇಶ್ ವಿರುದ್ಧ ಬಿಡದಿಯಲ್ಲಿ ಎಫ್ಐಆರ್ ದಾಖಲು
– ಕೆಳಗೆ ಬಿದ್ದಾಗ ತುಳಿದು ‘ಸಾಯಿ ಸಾಯಿ’ ಎಂದ ಗಣೇಶ್
– ನಾಯಕರು ತಡೆಯದೇ ಇದ್ದರೆ ನನ್ನ ಕೊಲೆ ಆಗ್ತಿತ್ತು
ಬೆಂಗಳೂರು: ಬಿಡದಿಯ ಈಗಲ್ಟನ್ ರೆಸಾರ್ಟಿ ನಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಕಂಪ್ಲಿ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ರಾಮನಗರ ತಾಲೂಕು ಬಿಡದಿ ಹೋಬಳಿ ಬಳಿ ಇರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ಸೂಚನೆಯಂತೆ ಲೋಕಸಭೆ ಚುನಾವಣೆ ಹಾಗೂ ಬರ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲು ಸಭೆ ಕೆರೆಯಲಾಗಿತ್ತು. ಈ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ಶನಿವಾರದಂದು ಸಭೆಯ ಬಳಿಕ ಇತರೇ ಶಾಸಕರೊಂದಿಗೆ ಊಟ ಮುಗಿಸಿಕೊಂಡು ಕಂಪ್ಲಿ ಶಾಸಕರಾದ ಗಣೇಶ್ ಅವರೊಂದಿಗೆ ರೂಂ ಕಡೆ ಹೋಗುತ್ತಿದ್ದೇವು. ಈ ವೇಳೆ ಗಣೇಶ್ ಮಾತನಾಡುತ್ತಾ,”ಈ ಬಾರಿ ಚುನಾವಣೆಗೆ ನೀನು ನನಗೆ ಹಣ ಸಹಾಯ ಸರಿಯಾಗಿ ಮಾಡಲಿಲ್ಲ. ನಿನ್ನ ತಂಗಿ ಮಗ ಸಂದೀಪ್ನನ್ನು ಮುಗಿಸುತ್ತೇನೆ” ಅಂದರು. ಅದಕ್ಕೆ ನಾನು,”ಯಾಕಪ್ಪ ನನ್ನ ಕುಟುಂಬದವರ ವಿಷಯಕ್ಕೆ ಬರುತ್ತೀಯಾ” ಎಂದು ಪ್ರಶ್ನಿಸಿದೆ. ಅದಕ್ಕೆ ಕೋಪಗೊಂಡ ಗಣೇಶ್, “ಮೊದಲು ನಿನ್ನನ್ನು ಸಾಯಿಸುತ್ತೇನೆ. ಆಗ ಎಲ್ಲವು ಸರಿಯಾಗುತ್ತೆ” ಅಂತ ಜೋರು ಜೋರಾಗಿ ಅವಾಚ್ಯ ಪದಗಳನ್ನು ಬಳಸಿ ನನ್ನನ್ನು ನಿಂದಿಸಿದ್ದಾರೆ. ಇದನ್ನೂ ಓದಿ: ಶಾಸಕರು ಹೊಡೆದಾಡಿಕೊಂಡಿದ್ದು ಯಾವ ಸೆಕ್ಷನ್ ನಲ್ಲಿ ಬರುತ್ತೆ- ಮಾಜಿ ಸಿಎಂ ಬಳಿ ಸ್ಪಷ್ಟೀಕರಣ ಕೇಳಿದ ಶ್ರೀರಾಮುಲು
ಬಳಿಕ ಪಕ್ಷದ ಮುಖಂಡರನ್ನು ಎತ್ತಿ ಕಟ್ಟಿಕೊಂಡು ಅವರ ಕೈಗೆ ಸಿಕ್ಕ ಪಾಟ್ ಹಾಗೂ ದೊಣ್ಣೆಯಿಂದ ನನಗೆ ತಲೆಗೆ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಅಲ್ಲದೇ ನನ್ನ ತಲೆಯನ್ನು ಗೋಡೆಗೆ ಗುದ್ದಿ,”ಪಿಸ್ತೂಲ್ ಕೊಡಿ. ಇವನನ್ನು ಇಲ್ಲೇ ಮುಗಿಸುತ್ತೇನೆ. ಇವನು ರಾಜಕೀಯವಾಗಿ ನನ್ನನ್ನು ಮುಗಿಸಲು ಹೊರಟಿದ್ದಾನೆ. ಇವನ ಪ್ರಾಣ ತೆಗೆದು ಇಲ್ಲೇ ಮುಗಿಸಿಬಿಡುತ್ತೇನೆ” ಎಂದು ಗದರಿದ್ದಾರೆ. ಬಳಿಕ ನಾನು ಕೆಳಗೆ ಬಿದ್ದಾಗ ನನ್ನನ್ನು,”ಸಾಯಿ ಸಾಯಿ” ಎಂದು ಹೇಳಿ ತುಳಿದು, ಕೈ ಮುಷ್ಠಿಕಟ್ಟಿ ಎದೆಗೆ ಹೊಡೆದಿದ್ದಾರೆ. ಇದರಿಂದ ಕಣ್ಣುಗಳು, ಮುಖ ಹಾಗೂ ದೇಹದ ಇತರೇ ಭಾಗಗಳಿಗೆ ಏಟುಗಳಾಗಿ ಊದಿಕೊಂಡಿದೆ.
ಈ ವೇಳೆ ಸ್ಥಳದಲ್ಲಿದ್ದ ಸಚಿವರಾದ ತುಕಾರಾಮ್, ಶಾಸಕರಾದ ರಘುಮೂರ್ತಿ, ರಾಮಪ್ಪ, ತನ್ವೀರ್ ಸೇಟ್ ಅವರು ಗಣೇಶ್ ಅವರನ್ನು ತಡೆಯದಿದ್ದರೆ ಅವರು ಖಂಡಿತ ನನ್ನನ್ನು ಕೊಲೆ ಮಾಡುತ್ತಿದ್ದರು. ಈ ಹಲ್ಲೆಯಿಂದ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಬಳಿಕ ಎಚ್ಚರವಾದಾಗ ನಾನು ಅಪೋಲೋ ಆಸ್ಪತ್ರೆಯಲ್ಲಿದ್ದೆ. ಇದನ್ನೂ ಓದಿ: ಕೇವಲ ಮಾತಿಗೆ ಮಾತು ಬೆಳೆದಿದೆ ಅಷ್ಟೇ, ಹಲ್ಲೆ ಮಾಡಿಲ್ಲ: ಕಂಪ್ಲಿ ಗಣೇಶ್
ಗಣೇಶ್ ಅವರು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ಮಾಡಿದ್ದಾರೆ. ಹಾಗೆಯೇ ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ಗಣೇಶ್ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇನೆ. ಹಾಗೆಯೇ ನನಗೆ ಮತ್ತು ನನ್ನ ಕುಟುಂಬದವರಿಗೆ ರಕ್ಷಣೆ ನೀಡಬೇಕೆಂದು ಕೋರುತ್ತಿದ್ದೇನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv