ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ತರಕಾರಿ ಮಾರುಕಟ್ಟೆಯ ಟೊಮೆಟೋ ವಿಭಾಗದ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಗಗನಕ್ಕೆ ಏರಿದೆ. ಸದ್ಯ ಮಾರುಕಟ್ಟೆಯಲ್ಲಿ ಅಂತಿಮ ಬಳಕೆದಾರರಿಗೆ ಒಂದು ಕೆಜಿ ಟೊಮೆಟೋ 80 ರಿಂದ 100 ರೂ.ಗೆ ಸಿಗುತ್ತಿದೆ. ಹೀಗಾಗಿ ಭಾರೀ ಬೆಲೆಯುಳ್ಳ ಟೊಮೆಟೋ ರಕ್ಷಣೆಗಾಗಿ ವ್ಯಾಪಾರಿಗಳು ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡಿದ್ದಾರೆ.
ಭದ್ರತೆ ಯಾಕೆ?: ಕೆಲವು ದಿನಗಳ ಹಿಂದೆ ಮುಂಬೈನ ದಾಷಿರ್ ಮಾರುಕಟ್ಟೆ ಆವರಣದಲ್ಲಿ 300 ಕೆಜಿ ತೂಕದ 30 ಕ್ರೇಟ್ ಟೊಮೆಟೋ ಕಳುವಾಗಿದ್ದು ಸುಮಾರು 70 ಸಾವಿರದಷ್ಟು ನಷ್ಟವಾಗಿದೆ ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೊಲದಲ್ಲಿದ್ದ ನೂರಾರು ಕೆಜಿ ಟೊಮೆಟೋ ಕದ್ದ ಖದೀಮರು
ಈ ಹಿನ್ನೆಲೆಯಲ್ಲಿ ಇಂದೋರ್ ನಲ್ಲಿ ವ್ಯಾಪಾರಸ್ಥರು ತಮ್ಮ ಟೊಮೆಟೋಗಳ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಮಾರುಕಟ್ಟೆಯ ಸ್ಟೋರ್ ರೂಮ್ನ ಸುತ್ತಲೂ ಕಾವಲು ಪಡೆ ನಿಂತಿದ್ದು, ಅವುಗಳನ್ನು ಗ್ರಾಹಕರಿಗೆ ತಲುಪಿಸುವವರೆಗೆ ರಕ್ಷಣೆಯನ್ನು ಒದಗಿಸುತ್ತಿದ್ದಾರೆ.
ಇತ್ತೀಚಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೊಬ್ಬರು ಮಾರಾಟಕ್ಕೆಂದು ಟ್ರಾಯ್ ನಲ್ಲಿ ತುಂಬಿಸಿ ತಮ್ಮ ಜಮೀನಿನಲ್ಲಿಟ್ಟ ಸುಮಾರು 70 ಸಾವಿರ ರೂ.ಯ ಮೌಲ್ಯದ ಟೊಮೆಟೋಗಳನ್ನು ಕಳ್ಳತನ ಮಾಡಲಾಗಿತ್ತು.