ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಒಟ್ಟು 68 ಸ್ಥಾನಗಳ ಪೈಕಿ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ (Congress) ಬಿಜೆಪಿಗಿಂತ (BJP) ಗಮನಾರ್ಹ ಓಟ ಮುಂದುವರಿಸಿದೆ.
ಹಿಮಾಚಲ ಪ್ರದೇಶದಲ್ಲಿ ಪ್ರತಿ ಚುನಾವಣೆಯಲ್ಲಿ ಸರ್ಕಾರ ಬದಲಾಗುತ್ತಿರುತ್ತದೆ. 2017ರಲ್ಲಿ ಬಿಜೆಪಿ 44 ಸ್ಥಾನ ಹಾಗೂ ಕಾಂಗ್ರೆಸ್ 21 ಸ್ಥಾನ ಗಳಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತ ವೈಫಲ್ಯ, ಪಕ್ಷದೊಳಗೆ ಎದ್ದ ಬಂಡಾಯ ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ. ಕಾಂಗ್ರೆಸ್ ನೀಡಿದ ಹೊಸ ಭರವಸೆಗಳಿಗೆ ಜನ ಮನಸೋತು ‘ಕೈ’ ಹಿಡಿದಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಕಾಂಗ್ರೆಸ್ಗೆ ಅಧಿಕಾರ – ಛತ್ತೀಸ್ಗಢಕ್ಕೆ ಶಾಸಕರು ಶಿಫ್ಟ್
ಅಧಿಕಾರ ವಿರೋಧಿ ಮತ್ತು ಹಾಲಿ ಸರ್ಕಾರವನ್ನು ಪುನರಾವರ್ತಿಸದಿರುವ ಗುಡ್ಡಗಾಡು ರಾಜ್ಯ ಸಂಪ್ರದಾಯ ಮುಂದುವರಿಕೆ
ಹಿಮಾಚಲ ಪ್ರದೇಶವು ಯಾವುದೇ ಆಡಳಿತ ಪಕ್ಷವನ್ನು ಮುಂದುವರಿಸಲು ಬಿಡಲ್ಲ ಎಂಬಂತಿದೆ. ಕಳೆದ 37 ವರ್ಷಗಳಿಂದ, ಅದು ಹಾಲಿ ಸರ್ಕಾರಕ್ಕೆ ಮತ ಹಾಕಿಲ್ಲ. ಇದು ಈ ಬಾರಿಯ ಚುನಾವಣೆ ಫಲಿತಾಂಶದಲ್ಲೂ ಗೋಚರಿಸಿದಂತೆ ಕಾಣುತ್ತಿದೆ. ರಾಜ್ಯದ ಇಬ್ಬರು ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ಕಾಂಗ್ರೆಸ್ನ ವೀರಭದ್ರ ಸಿಂಗ್ ಮತ್ತು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಕೂಡ ಈ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಲು ವಿಫಲರಾಗಿದ್ದಾರೆ. ಈ ಚುನಾವಣೆಗಳಲ್ಲಿಯೂ ಮತದಾರರು ಈ ಸಂಪ್ರದಾಯಕ್ಕೆ ಬದ್ಧರಾಗಿರುವಂತೆ ತೋರುತ್ತಿದೆ.
ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಅವರು ಕಳೆದ ವರ್ಷ ನಿಧನರಾಗಿದ್ದು, ಪಕ್ಷದ ಬಗ್ಗೆ ಜನರಲ್ಲಿ ಮರುಕವುಂಟಾಗಿರುವುದು ಕಾಂಗ್ರೆಸ್ ಆಯ್ಕೆಗೆ ಪೂರಕವಾದಂತಿದೆ. ಗುಜರಾತ್ನಲ್ಲಿ ಬಿಜೆಪಿಗೆ ಅಪಾರ ಬೆಂಬಲದ ಅಲೆಯಿದ್ದರೂ, ಕಾಂಗ್ರೆಸ್ ಬಗೆಗೆ ಜನ ಸ್ವಲ್ಪ ಪ್ರೀತಿ ಉಳಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಅವರು ನೀಡಿದ ಕೊಡುಗೆಯೇ ಇದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಗುಜರಾತ್ ಚುನಾವಣೆ – ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಏನು?
ಸರ್ಕಾರಿ ನೌಕರರ ಬೆಂಬಲ ಮತ್ತು ಹಳೆಯ ಪಿಂಚಣಿ ಯೋಜನೆ
ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರ ಮತಬ್ಯಾಂಕ್ ಪ್ರಮುಖವಾಗಿದೆ. 2 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಮತ್ತು ಶೇಕಡಾ 5 ರಷ್ಟು ಮತಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಳೇ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗುವುದು ಎಂದು ಪ್ರಚಾರದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಅವರು ಭರವಸೆ ನೀಡಿದ್ದರು. ಅದು ಚುನಾವಣೆಯಲ್ಲಿ ಕಾಂಗ್ರೆಸ್ಗೆ ವರದಾನವಾಗಿದೆ.
ಆಡಳಿತದಲ್ಲಿ ವೈಫಲ್ಯ ಮತ್ತು ಬಿಜೆಪಿಯಲ್ಲಿ ಬಂಡಾಯ
ಸಿಎಂ ಜೈ ರಾಮ್ ಠಾಕೂರ್ ಅವರು ಉತ್ತಮ ವ್ಯಕ್ತಿತ್ವದವರಾದರೂ, ತಮ್ಮ ಹತ್ತಿರವಿರುವ ಕುತಂತ್ರಿಗಳ ಗುಂಪಿಗೆ ಸರ್ಕಾರ ನಡೆಸಲು ಬಿಡುತ್ತಿದ್ದಾರೆ ಎಂಬ ಭಾವನೆ ಜನರಲ್ಲಿತ್ತು.
ಮುಖ್ಯ ಕಾರ್ಯದರ್ಶಿಗಳ ಆಗಾಗ್ಗೆ ಬದಲಾವಣೆ ಮಾಡಲಾಗುತ್ತಿತ್ತು. ಕಳೆದ ಐದು ವರ್ಷಗಳಲ್ಲಿ ರಾಜ್ಯವು ಏಳು ಅಧಿಕಾರಿಗಳನ್ನು ಹುದ್ದೆಯಲ್ಲಿ ನೋಡಿದೆ. ಪೊಲೀಸ್ ನೇಮಕಾತಿ ಹಗರಣ ಹಾಗೂ ಆರಿ ನಗರ ಪಂಚಾಯತ್ ಅಧಿಸೂಚನೆ ಮತ್ತು ಕರಡು ಶಿಮ್ಲಾ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ತರಾತುರಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಅಲ್ಲದೇ 11 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಆಡಳಿತ ವಿರೋಧಿ ಅಲೆಗೆ ಕಾರಣವಾಯಿತು. ಇದನ್ನೂ ಓದಿ: ಗುಜರಾತ್ನಲ್ಲಿ ಆಪ್ಗೆ ಬಿಜೆಪಿಯಿಂದಲೇ ಫಂಡಿಂಗ್: ಸಿದ್ದರಾಮಯ್ಯ
ಅಗ್ನಿಪಥ್, ನಿರುದ್ಯೋಗ, ಬೆಲೆ ಏರಿಕೆ
ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಪ್ರತಿ ವರ್ಷ ಸಶಸ್ತ್ರ ಪಡೆಗಳನ್ನು ಸೇರುತ್ತಾರೆ. ಕೇಂದ್ರ ಸರ್ಕಾರದ ‘ಅಗ್ನಿಪಥ್’ ಯೋಜನೆಯಲ್ಲಿ ಸೈನಿಕರನ್ನು ಕೇವಲ ನಾಲ್ಕು ವರ್ಷಗಳವರೆಗೆ ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದು, ರಾಜ್ಯದಲ್ಲಿ ಯುವಜನರ ಆಕ್ರೋಶಕ್ಕೆ ಕಾರಣವಾಯಿತು. ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಬೆಂಬಲಿಸಿದ್ದ ಮೇಜರ್ ವಿಜಯ್ ಮಂಕೋಟಿಯಾ ಅವರಂತಹ ಹಿರಿಯರು ಕೂಡ ಈ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ ಎಲ್ಪಿಜಿ ಸಿಲಿಂಡರ್ ದರ ಏರಿಕೆಯು ಮಹಿಳೆಯರ ವಿರೋಧಕ್ಕೆ ಕಾರಣವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿ ಬಂದಿದೆ.