ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಇಂದು (ಆ.8) ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ, ‘ಗಂಧದ ಗುಡಿ’ ಸಿನಿಮಾವನ್ನು ಸ್ಮರಿಸುವುದರ ಜೊತೆಗೆ ಕನ್ನಡ ಭಾಷೆಯನ್ನು ಗೌರವಿಸುತ್ತೇನೆ ಎಂದು ಪವನ್ ಕಲ್ಯಾಣ್ ಮಾತನಾಡಿದ್ದಾರೆ.
ಅರಣ್ಯ ಇಲಾಖೆ ಕುರಿತ ಸಭೆಯ ಬಳಿಕ ಪವನ್ ಕಲ್ಯಾಣ್ ಮಾತನಾಡಿ, ನಾನು ಕನ್ನಡ ಭಾಷೆಯನ್ನ ತುಂಬಾ ಗೌರವಿಸುತ್ತೇನೆ ಎಂದಿದ್ದಾರೆ. ಈ ವೇಳೆ, ಡಾ.ರಾಜ್ಕುಮಾರ್ (Rajkumar) ಅವರು ‘ಗಂಧದ ಗುಡಿ’ (Gandhada Gudi) ಚಿತ್ರದಲ್ಲಿ ಅರಣ್ಯ ರಕ್ಷಣೆ ಮತ್ತು ಶ್ರೀಗಂಧ ಉಳಿಸುವ ಪ್ರಯತ್ನ ತೋರಿಸಿದ್ದರು. ಆದರೆ ಈಗ ಗಂಧ ಕಳ್ಳತನ ಇರುವ ಸಿನಿಮಾ ಮಾಡುವಂತಾಗಿದೆ. ಇದನ್ನೂ ಓದಿ:ಅಭಿಷೇಕ್ ಅಂಬರೀಶ್ ಪತ್ನಿ ಪ್ರೆಗ್ನೆಂಟ್- ಸುಮಲತಾ ಮನೆಯಲ್ಲಿ ಸಂಭ್ರಮ
ರಾಜ್ಕುಮಾರ್ ಅವರ ‘ಗಂಧದಗುಡಿ’ ನಾನು ನೋಡಿದ್ದೇನೆ. ಕಳ್ಳಸಾಗಾಣೆಯಿಂದ ಯಾವ ರೀತಿ ಅರಣ್ಯ ರಕ್ಷಣೆ ಮಾಡುತ್ತಾರೆ ಆ ಚಿತ್ರದಲ್ಲಿದೆ. ರಿಯಲ್ ಲೈಫ್ನಲ್ಲೂ ಇದನ್ನು ರಕ್ಷಣೆ ಮಾಡಬೇಕಿದೆ. ಕರ್ನಾಟಕದ ಜೊತೆ ನಮ್ಮ ರಾಜ್ಯವು ಉತ್ತಮ ಸಂಬಂಧ ಹೊಂದಿದೆ. ಇಂದಿನ ಸಭೆಯಲ್ಲಿ ಏಳು ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ರಕ್ತಚಂದನ ರಕ್ಷಣೆ, ಪುಂಡಾನೆ ಸೆರೆಹಿಡಿಯೋದು, ಅರಣ್ಯ ರಕ್ಷಣೆ ಸೇರಿದಂತೆ ಏಳು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
ನಾನು ಕೂಡ ಅರಣ್ಯ ರಕ್ಷಕನಾಗಿದ್ದೇನೆ. ಕುವೆಂಪು ಅವರ ಪದಗಳಿಂದ ಪ್ರೇರಿತನಾಗಿದ್ದೇನೆ. ಆದರೆ ಈಗ ಇಂಗ್ಲೀಷ್ ಭಾಷೆ ಬಳಸುತ್ತಿರೋದಕ್ಕೆ ವಿಷಾದಿಸುತ್ತೇನೆ. ಆದರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಕಲಿಯಲು ಮಾತನಾಡಲು, ಪ್ರಯತ್ನಿಸುತ್ತೇನೆ. ಕನ್ನಡ ಕಲಿಯಲು ಆಸೆ ಇದೆ ಎಂದಿದ್ದಾರೆ. ಅದಷ್ಟೇ ಅಲ್ಲ, ಈ ವೇಳೆ ಕುವೆಂಪು ಕಾವ್ಯ ಕೂಡ ಓದಿ ಹೇಳಿದ್ದಾರೆ ಪವನ್ ಕಲ್ಯಾಣ್.