– ದಾಂಪತ್ಯದಲ್ಲಿ ಬಿರುಕುಂಟಾಗಿ ವಿಚ್ಛೇದನ ಆಗ್ತಿದೆ
– ಕೆಲ ದಂಪತಿಗಳಿಗೆ ಮದ್ವೆಯಾಗಿ 5 ವರ್ಷಗಳಾದ್ರೂ ಮಕ್ಕಳಾಗಿಲ್ಲ
– ನೊಂದ ಪೊಲೀಸರ ಅಳಲು
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ವರ್ಗಾವಣೆ ಸಿಗದ ಕಾರಣ ರಾಜ್ಯ ಪೊಲೀಸ್ ಇಲಾಖೆಯ (Police Department) ಅಧಿಕಾರಿಗಳೇ ದಯಾ ಮರಣ ಕೋರಿ ರಾಷ್ಟ್ರಪತಿಗಳಿಗೆ (President Of India) ಪತ್ರ ಬರೆದಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಕಳೆದ ಮೂರು ವರ್ಷಗಳಿಂದ ವರ್ಗಾವಣೆಯಾಗಿಲ್ಲ ಎಂದು ಹೇಳಿ ನೊಂದ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಕೆಇಎ ಪ್ರಶ್ನೆಪತ್ರಿಕೆ ಲೀಕ್ ಮಾಡಲು 40 ಲಕ್ಷ ನೀಡಿದ ಆರೋಪ – ಸರ್ಕಾರಿ ಕೆಲಸಕ್ಕೆ ಸೇರಿ ತಿಂಗಳಲ್ಲೇ ಹಾಸ್ಟೆಲ್ ವಾರ್ಡನ್ ಜೈಲುಪಾಲು
ನೊಂದ ಪೊಲೀಸರು ಬರೆದ ಪತ್ರದಲ್ಲಿ ಏನಿದೆ?
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಂತರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತಿ-ಪತ್ನಿಯರಿಗೆ ವರ್ಗಾವಣೆ ಆಗಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಹಾಗೂ KCSR ನಿಯಮದ (KCSR Rules) ಪ್ರಕಾರ ಪತಿ-ಪತ್ನಿ ಆದವರು ಒಂದೇ ಘಟಕ ಹಾಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಹೀಗಿದ್ದರೂ ಕಳೆದ ಮೂರು ವರ್ಷಗಳಿಂದ ಕರ್ನಾಟಕ ಸರ್ಕಾರವಾಗಲಿ, ರಾಜ್ಯ ಗೃಹ ಸಚಿವರಾಗಲಿ ಅಥವಾ ಪೊಲೀಸ್ ಮುಖ್ಯಸ್ಥರಾಗಲಿ ಯಾವುದೇ ವರ್ಗಾವಣೆ ಮಾಡುತ್ತಿಲ್ಲ.
ಪತಿ-ಪತ್ನಿ ಪ್ರಕರಣದಲ್ಲಿ ಕಳೆದ ಮೂರು ವರ್ಷಗಳಿಂದ ಗೃಹಸಚಿವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದ್ರೆ ಗೃಹ ಸಚಿವರು ವರ್ಗಾವಣೆ ಮಾಡುತ್ತೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ನಾವು ಕಳೆದ 10-15 ವರ್ಷಗಳ ಕಾಲ ತಂದೆ-ತಾಯಿ, ಹೆಂಡತಿ-ಮಕ್ಕಳನ್ನು ಬಿಟ್ಟು ಕೆಲಸ ಮಾಡುತ್ತಿದ್ದೇವೆ. ನಾವು ಒಂದು ಕಡೆ, ಹೆಂಡತಿ ಒಂದು ಕಡೆ ನೌಕರಿ ಮಾಡುತ್ತಾ ಹೆತ್ತ ಮಕ್ಕಳ ಮಾಲನೆ ಮಾಡದೇ, ತಂದೆ-ತಾಯಿಯನ್ನೂ ಪೋಷಣೆ ಮಾಡಲಾಗದೇ ಜೀವನ ನಡೆಸುವಂತಾಗಿದೆ. ವರ್ಗಾವಣೆ ಆಗದೇ ಇರೋದಕ್ಕೆ ದಾಂಪತ್ಯದಲ್ಲಿ ಬಿರುಕುಂಟಾಗಿ ಎಷ್ಟೋ ಸಂಸಾರಗಳು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ. ಕೆಲವು ವಿಚ್ಛೇದನ ಆಗಿಹೋಗಿದೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ವಿರುದ್ಧ ಪತ್ರ ಸಮರ- ಇದೆಲ್ಲಾ ವಿರೋಧಿಗಳ ಸ್ಪಾನ್ಸರ್ ಎಂದ ಕೇಂದ್ರ ಸಚಿವೆ
ಇನ್ನೂ ಕೆಲವರು ಪತಿ-ಪತ್ನಿ ಬೇರೆ ಬೇರೆ ಸ್ಥಳಗಳಲ್ಲಿ ಇರೋದ್ರಿಂದ ಕೆಲವರಿಗೆ ಮದುವೆಯಾಗಿ 5 ವರ್ಷ ಕಳೆದರೂ ಮಕ್ಕಳಾಗಿಲ್ಲ. ನಮ್ಮದು ಶಿಸ್ತಿನ ಇಲಾಖೆ, ಬೇರೆ ಇಲಾಖೆಯವರಂತೆ ಪ್ರತಿಭಟನೆ ಮಾಡಲು ಅವಕಾಶ ಇರುವುದಿಲ್ಲ. ಬೇರೆ ಇಲಾಖೆಗಳಲ್ಲಿ ಅಂತರ ಜಿಲ್ಲೆಗಳಿಗೆ ವರ್ಗಾವಣೆ ನಡೆದಿದೆ. ಆದ್ರೆ ಪೊಲೀಸ್ ಇಲಾಖೆಯಲ್ಲಿ 2021ರಿಂದಲೂ ವರ್ಗಾವಣೆ ಆಗಿಲ್ಲ. ಆದಕಾರಣ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಆಗುತ್ತಿಲ್ಲ. ನೆಮ್ಮದಿ ಅನ್ನೋದು ಹಾಳಾಗಿ, ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ. ಆದ ಕಾರಣ ನಮಗೆ ದಯಾಮರಣ ಕಲ್ಪಿಸಿಕೊಡಬೇಕು ಎಂದು ನೊಂದ ಮನಸ್ಸಿನಿಂದ ಬೇಡಿಕೊಳ್ಳುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ: ಅನಂತ್ ಕುಮಾರ್ ಹೆಗಡೆ