ತುಮಕೂರು: ವಿದ್ಯಾರ್ಥಿಗಳ ಕೊರತೆಯಿಂದ 10 ವರ್ಷಗಳಿಂದ ಮುಚ್ಚಿದ್ದ ಸರ್ಕಾರಿ ಶಾಲೆಗೆ ಗ್ರಾಮಸ್ಥರೆಲ್ಲರು ಸೇರಿ ಮರುಜೀವ ನೀಡಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಗೂರು ಕ್ಲಸ್ಟರ್ ವ್ಯಾಪ್ತಿಯ ಯರೇಕಟ್ಟೆ ಸರ್ಕಾರಿ ಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿತ್ತು. ಈ ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ ಕೇಳುತ್ತಿದೆ. ಸುಮಾರು 30 ಕುಟುಂಬಗಳಿರುವ ಈ ಗ್ರಾಮದಿಂದ ಅಕ್ಕಪಕ್ಕದ ಗ್ರಾಮಗಳ ಶಾಲೆಗೆ ಮಕ್ಕಳು ಹೋಗುತ್ತಿದ್ದರು. ಗ್ರಾಮದಲ್ಲಿ ಶಾಲೆಯೊಂದು ಇರಬೇಕೆಂಬ ಗ್ರಾಮಸ್ಥರ ಬೇಡಿಕೆಯಂತೆ ಮೂರು ದಶಕಗಳ ಹಿಂದೆ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿತ್ತು. ಇದನ್ನೂ ಓದಿ: ಸರ್ಕಾರಿ ಕಚೇರಿ, ಮಾಲ್, ಹೋಟೆಲ್ಗಳಲ್ಲಿ ಕೆಲಸ ಮಾಡೋರಿಗೆ ಎರಡು ಡೋಸ್ ಕಡ್ಡಾಯ: ಆರ್. ಅಶೋಕ್
ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿತ್ತು. ಕ್ರಮೇಣ ಇಳಿಮುಖವಾಯಿತು. ವಿದ್ಯಾರ್ಥಿಗಳ ಕೊರತೆಯಿಂದ 10 ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿತ್ತು. ಶಾಲೆ ಮುಚ್ಚುವ ವೇಳೆ ವಿದ್ಯಾರ್ಥಿಗಳ ಹಾಜರಾತಿ 2ಕ್ಕೆ ಇಳಿದಿತ್ತು. ಶಾಲೆಯ ದಾಖಲಾತಿಗಳನ್ನು ಪಕ್ಕದ ಬರಗೂರು ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಿ ಶಾಲೆಯನ್ನು ಮುಚ್ಚಲಾಗಿತ್ತು. ಇದನ್ನೂ ಓದಿ: ಕಾರಿನಲ್ಲಿ ತೆರಳುತ್ತಿದ್ದಾಗ ಮಹಿಳೆಗೆ ಡ್ರಗ್ಸ್ ನೀಡಿ ಅತ್ಯಾಚಾರ- ಸೇನಾ ಸಿಬ್ಬಂದಿ ಅರೆಸ್ಟ್
ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದ ಕೆಲವು ಪೋಷಕರು ದೂರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿದ್ದರು. ಕೆಲವು ವಿದ್ಯಾರ್ಥಿಗಳು ಮಾತ್ರ ಅಕ್ಕಪಕ್ಕದ ಶಾಲೆಗಳಿಗೆ ಹೋಗುತ್ತಿದ್ದರು. ಬೇರೆ ಊರುಗಳಲ್ಲಿ ನೆಲೆ ಕಂಡುಕೊಂಡಿದ್ದ ಗ್ರಾಮಸ್ಥರು, ಕೋವಿಡ್ ಸಂಕಷ್ಟದ ನಂತರ ಮತ್ತೆ ಗ್ರಾಮಕ್ಕೆ ಬಂದಿದ್ದಾರೆ. ತಮ್ಮೂರಿನ ಶಾಲೆಯತ್ತ ಗಮನ ಹರಿಸಿದ್ದಾರೆ. ಗ್ರಾಮದ ಕೆಲವು ಯುವಕರು ಗ್ರಾಮದಲ್ಲಿ ಸಭೆ ನಡೆಸಿ, ತಮ್ಮೂರಿನ ಶಾಲೆಯನ್ನು ಮತ್ತೆ ಪ್ರಾರಂಭಿಸುವ ಪಣತೊಟ್ಟು ಶಾಲೆಯ ಆರಂಭಕ್ಕೆ ಕಾರಣರಾಗಿದ್ದಾರೆ. ಶಾಲೆಗೆ 1ರಿಂದ 4ನೇ ತರಗತಿವರೆಗೆ 16 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹತ್ತು ವರ್ಷಗಳಿಂದ ಬಣಗುಡುತ್ತಿದ್ದ ಶಾಲೆ ಕಟ್ಟಡದಲ್ಲಿ ಮತ್ತೆ ಮಕ್ಕಳ ನಗು ಚೆಲ್ಲಿದೆ. ಇದನ್ನೂ ಓದಿ: ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣ- ಮಾಜಿ ಸಚಿವ ಪಿ.ಚಿದಂಬರಂ, ಪುತ್ರನಿಗೆ ಸಮನ್ಸ್