ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

Public TV
3 Min Read
FotoJet 57

‘ಸತ್ಯಕ್ಕೆ ಎರಡು ಮುಖಗಳಿರುತ್ತವೆ’ ಎನ್ನುತ್ತದೆ ಸಂಶೋಧನಾ ಪರಿಭಾಷೆ. ಯಾವುದೋ ಒಂದು ಘಟನೆ ನಡೆದಾಗ ಆ ಎರಡೂ ಮುಖಗಳೊಂದಿಗೆ ಅದು ಚಲನೆ ಪಡೆಯುತ್ತದೆ. ಬಲಾಢ್ಯತೆಯತ್ತ ಕೊನೆಗೊಳ್ಳುತ್ತದೆ. ಇದು ಸಹಜ ಪ್ರಕ್ರಿಯೆ. ಇಂತಹ ಪ್ರಕ್ರಿಯೆಯಲ್ಲೇ ಸಾಗಿ ಬಂದದ್ದು ‘ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಮಹಾವಲಸೆಯ ಚರಮಗೀತೆ. ಇದನ್ನೂ ಓದಿ : ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

FotoJet 5 10

ಸದ್ಯ ಕಾಶ್ಮೀರ ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡಂತೆ ತಣ್ಣಗಾಗಿದೆ. ರಾಜಕೀಯ ಮೇಲಾಟಗಳು ಗುದುಮುರುಗಿ ಕಟ್ಟಿಕೊಂಡು ಮೂಲೆ ಗುಂಪಾಗುತ್ತಿವೆ. ಇಂತಹ ಹೊತ್ತಿನಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧದ ಕುರಿತು ಸಿನಿಮಾ ಮಾಡಿದ್ದಾರೆ. ಅದನ್ನು ‘ದಿ ಕಾಶ್ಮೀರ್ ಫೈಲ್ಸ್’ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ.

ಸಿನಿಮಾದ ಶೀರ್ಷಿಕೆಯೇ ಪ್ರಚುರಪಡಿಸುವಂತೆ ನರಮೇಧದ ಹಿಂದಿರುವ ಇತಿಹಾಸವನ್ನು ಬಿಚ್ಚಿಡುವಂತಹ ‘ಫೈಲ್‍’ ಇದಾಗಿದೆ. ಈ ‘ಫೈಲ್’ ನ ಪುಟಪುಟದಲ್ಲೂ ರಕ್ತಸಿಕ್ತ ಅಧ್ಯಾಯಗಳಿವೆ. ಬರೆದ ಶಾಹಿ ಕೂಡ ಕೆಂಪಾಗಿದೆ. ಇಂತಹ ಹತ್ಯಾಕಾಂಡವನ್ನು ಸಿನಿಮಿಯ ರೂಪದಲ್ಲಿ ತರದೇ, ನಡೆದ ಘಟನೆಯನ್ನು ಹಸಿಹಸಿಯಾಗಿಯೇ ತರುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.  ಇದನ್ನೂ ಓದಿ : ಉಪೇಂದ್ರ ಅವರ ಹೊಸ ಸಿನಿಮಾದ ಪೋಸ್ಟರ್ : ಅಸಲಿನಾ? ನಕಲಾ?

FotoJet 4 21

ಸಾಮಾನ್ಯವಾಗಿ ಸಿನಿಮಾಗಳೆಂದರೆ ನಾಟಕೀಯ ನಿರೂಪಣೆಗೆ ಹೆಚ್ಚು ಒತ್ತು ಕೊಡಲಾಗುತ್ತದೆ. ಕಥೆಯ ಕುತೂಹಲವನ್ನು ಕಾಪಿಡಲು ಅಲ್ಲಲ್ಲಿ, ನಾಟಕೀಯ ತಿರುವುಗಳನ್ನೂ ನೀಡಲಾಗುತ್ತದೆ. ಪ್ರೇಕ್ಷಕನ ಆಸಕ್ತಿಯ ಅನುಗುಣವಾಗಿ ಪಾತ್ರಕ್ಕೆ ಹಿನ್ನೆಲೆ ಒದಗಿಸಲಾಗುತ್ತದೆ. ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಅದ್ಯಾವ ಗೋಜಿಗೂ ನಿರ್ದೇಶಕರು ಹೋಗಿಲ್ಲ. ತಮ್ಮ ಸಂಶೋಧನೆಯಲ್ಲಿ ಕಂಡುಂಡ ಕಥನವನ್ನು ಹಾಗೆಯೇ ಬಿಚ್ಚಿಡುತ್ತಾ ಹೋಗಿದ್ದಾರೆ. ಹಾಗಾಗಿ ಚಿತ್ರದ ತುಂಬಾ ಮನಸ್ಸಿಗೆ ಘಾಸಿಯಾಗುವಷ್ಟು ಕ್ರೌರ್ಯವೇ ತುಂಬಿದೆ.  ಅದೊಂದು ಹತ್ಯಾಕಾಂಡದ ಕಥೆಯೇ ಆಗಿದ್ದರಿಂದ ತೆರೆಯ ಮೇಲೂ ಅದನ್ನೇ ಮೂಡಿಸಿದ್ದಾರೆ.

FotoJet 1 43

ಪುಷ್ಕರ್ ನಾಥ್ ಪಂಡಿತ್ (ಅನುಪಮ್ ಖೇರ್) ಪಾತ್ರವನ್ನು ಮುಖ್ಯವಾಗಿಟ್ಟುಕೊಂಡು ಕಥೆಯನ್ನು ಹೇಳುತ್ತಾ ಸಾಗುವ ನಿರ್ದೇಶಕರು, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಮೊಮ್ಮಗನಿಗೆ ತನ್ನ ಕುಟುಂಬದ ಇತಿಹಾಸ ಹೇಳುತ್ತಾ ಸಾಗುವ ಕಥನ ಕ್ರಮದಲ್ಲಿ ಇಡೀ ಸಿನಿಮಾ ಸಾಗುತ್ತದೆ. ಈ ಪುಷ್ಕರ್ ನಾಥ್  ಮೂಲಕ ಕಾಶ್ಮೀರಿ ಪಂಡಿತರ ಮೇಲಾದ ದಾಳಿಯನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಸಾಗುತ್ತಾರೆ ನಿರ್ದೇಶಕರು. ಈ ಕಥನ ಕವಲುಗಳಲ್ಲಿ ಮಾಧ್ಯಮ, ರಾಜಕಾರಣ, ಭಯೋತ್ಪಾದನೆ, ಕೋಮುಗಲಭೆ, ಮತಾಂತರ, ಎರಡು ಕೋಮಿನ ನಡುವಿನ ಸಂಘರ್ಷ ಹೀಗೆ ಸಾಕಷ್ಟು ಘಟನೆಗಳು ದೃಶ್ಯಗಳಾಗಿ ಬಂದು ಹೋಗುತ್ತವೆ. ಇದೊಂದು ಒಪ್ಪಿತ ಸಿನಿಮಾ ಮಾಧ್ಯಮವಾಗಿರುವುದರಿಂದ ನಿರ್ದೇಶಕ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು, ಅವನದ್ದೇ ಆದ ರೀತಿಯಲ್ಲಿ ಅಂತ್ಯ ಕೊಡುತ್ತಾನೆ. ಅಲ್ಲಿಗೆ ನೋಡುಗನ ಮನಸ್ಸು ಹದಗೊಳ್ಳುವುದೇ ಬೇರೆ ರೀತಿಯಾಗಿ. ಅಷ್ಟರ ಮಟ್ಟಿಗೆ ಸಿನಿಮಾ ನೋಡುಗನ ಎದೆಯೂರಿ ಹೆಚ್ಚಿಸುತ್ತದೆ.  ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

FotoJet 2 42

ಭಯೋತ್ಪಾದಕರು ‘ಮತಾಂತರವಾಗಿ, ಸಾಯಿರು ಅಥವಾ ಓಡಿ ಹೋಗಿ’ ಎಂದು ಹೇಳುವ ಮಾತುಗಳು ಮತ್ತು ಮುಸ್ಲಿಂ ಹುಡುಗರೇ ತುಂಬಿರುವ ಗ್ಯಾಂಗ್ ನಲ್ಲಿ ಹಿಂದೂ ಹುಡುಗನೊಬ್ಬ ಕ್ರಿಕೆಟ್ ಆಡುತ್ತಾ, ಅಲ್ಲೊಂದು ರೆಡಿಯೋ, ಅದರಲ್ಲಿ ಕ್ರಿಕೆಟ್ ಕಾಮೆಂಟರಿ ಕೇಳುತ್ತಾ, ಸಡನ್ನಾಗಿ ಹಿಂದೂ ಹುಡುಗನ ಬಾಯಿಂದ ‘ಸಚಿನ್.. ಸಚಿನ್..’ ಕೂಗು. ನಂತರ ನಡೆಯೋದೆಲ್ಲ ಹಿಂಸೆ, ರಕ್ತಪಾತ, ಯುದ್ಧ, ಧರ್ಮಯುದ್ಧ. ಹೀಗೆ ಒಂದು ಕೋಮಿನ ಕ್ರೌರ್ಯವನ್ನೇ ಢಾಳಾಗಿ ತೋರಿಸುತ್ತಾ ಹೋಗಿದ್ದಾರೆ ನಿರ್ದೇಶಕರು. ಹಾಗಾಗಿ ಸಿನಿಮಾದುದ್ದಕ್ಕೂ ಅಚ್ಚರಿ ಅನಿಸುವ, ಚರ್ಚೆಗೆ ಹಚ್ಚುವ ಮತ್ತು ಭಾವುಕತೆ ಕಟ್ಟಿಕೊಡುವ ದೃಶ್ಯಗಳೇ ತುಂಬಿ ಹೋಗಿವೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್

FotoJet 3 35

ಇಡೀ ಸಿನಿಮಾ ಕಾಶ್ಮೀರಿ ಪಂಡಿತರ ದೃಷ್ಟಿಕೋನದ ಮೂಲಕವೇ ಬಿಚ್ಚಿಕೊಳ್ಳುತ್ತಾ ಹೋಗಿದ್ದರಿಂದ ಮತ್ತು ಅದನ್ನು ಭಯೋತ್ಪಾದಕರ ಚಿತ್ರಹಿಂಸೆಗೆ ನಲುಗಿ ಪ್ರಾಣಬಿಟ್ಟ ಕುಟುಂಬವೊಂದರ ಕಥೆಯ ಮೂಲಕ ಹೇಳಿದ್ದರಿಂದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಒಂದು ವರ್ಗದ ಜನಕ್ಕೆ ಇಷ್ಟವಾಗಿ ಮತ್ತು ಮತ್ತೊಂದು ವರ್ಗದ ಜನಕ್ಕೆ ಅದು ಓಲೈಕೆಯಾಗಿ ಕಾಣುವುದರಲ್ಲಿ ಅನುಮಾನವಿಲ್ಲ.

2 ಗಂಟೆ 50 ನಿಮಿಷ ಕಾಲಾವಧಿಯ ಈ ಚಿತ್ರ, ಸಿನಿಮಾದ ಸಿದ್ಧಸೂತ್ರಗಳಾಚೆ ರೂಪುಗೊಂಡಿದ್ದರಿಂದ ಒಂದಷ್ಟು ಕಡೆ ಡಾಕ್ಯುಮೆಂಟರಿ ರೂಪವಾಗಿಯೂ ಕಾಣುತ್ತದೆ. ಉಳಿದಂತೆ ಅದೊಂದು ಕಾಶ್ಮೀರ್ ಫೈಲ್ಸ್.

Share This Article
Leave a Comment

Leave a Reply

Your email address will not be published. Required fields are marked *