ಶಿಮ್ಲಾ: ಜೋರಾಗಿ ಮಾತನಾಡಿದರೆ ಕೊರೊನಾ ವೈರಸ್ ಹರಡಬಹುದು ಎಂದು ಹಿಮಾಚಲಪ್ರದೇಶದ ವಿಧಾನಸಭೆ ಸ್ಪೀಕರ್ ವಿಪಿನ್ ಸಿಂಗ್ ಪಾರ್ಮರ್ ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಕೋವಿಡ್ 19 ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕರ ಬಳಿ ಸ್ಪೀಕರ್ ಮನವಿ ಮಾಡಿದರು. ಸೋಮವಾರ ಬಿಜೆಪಿ ಶಾಸಕಿ ರೀಟಾ ದೇವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿತ್ತು.
ರೀಟಾ ದೇವಿ ಅವರು ಸೋಮವಾರ ಸಂಜೆ ಕೋವಿಡ್ 19 ಟೆಸ್ಟ್ ಮಾಡಿದ್ದು, ಇದಕ್ಕೂ ಮೊದಲು ಅವರು ಅಧಿವೇಶನದಲ್ಲಿ ಹಾಜರಾಗಿದ್ದರು. ಆದರೆ ವಿಧಾನಸಭೆಯಲ್ಲಿ ಅವರು ಇತರ ಶಾಸಕರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.
ಅಧಿವೇಶನದ ಎರಡನೇ ದಿನವಾದ ಇಂದು ಆರಂಭದಲ್ಲಿ ಸ್ಪೀಕರ್ ಅವರು. ಕೊರೊನಾ ಮಾರ್ಗದರ್ಶಿ ನಿಯಮಗಳ ಪ್ರಕಾರ, ಜೋರಾಗಿ ಮಾತನಾಡುವುದು ಸಹ ಕೋವಿಡ್ 19 ವೈರಸ್ ಹರಡಲು ಕಾರಣವಾಗಬಹುದು. ಹೀಗಾಗಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಮಾನ್ಯ ರೀತಿಯಲ್ಲಿ(ಸ್ವಲ್ಪ ಮೆತ್ತಗೆ) ಮಾತನಾಡಿ ಎಂದು ಸಲಹೆ ನೀಡಿದರು. ಸ್ಪೀಕರ್ ಈ ರೀತಿಯಾಗಿ ಹೇಳುತ್ತಿದ್ದಂತೆಯೇ ಇಡೀ ಅಧಿವೇಶನ ಒಂದು ಬಾರಿ ನಡೆಗಡಲಲ್ಲಿ ತೇಲಾಡಿತು. ಅಲ್ಲದೆ ಚರ್ಚೆಯ ವೇಳೆ ಹಲವರು ಜೋರಾಗಿಯೇ ಮಾತನಾಡಿದರು.
ಈ ಮಧ್ಯೆ ಕೊರೊನಾ ವೈರಸ್ ನಿಂದ ಈಗತಾನೇ ಚೇತರಿಸಿಕೊಂಡ ಬಳಿಕ ಇಂದು ಅಧಿವೇಶನಕ್ಕೆ ಹಾಜರಾದ ಬಿಜೆಪಿ ಶಾಸಕ ಪರಮ್ಜಿತ್ ಸಿಂಗ್ ಪಮ್ಮಿಯನ್ನು ಸ್ಪೀಕರ್ ಸ್ವಾಗತಿಸಿದರು. ಪರಮ್ಜಿತ್ ಅವರಿಗೆ ಆಗಸ್ಟ್ 17ರಂದು ನಡೆಸಿದ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಸಚಿವ ಸುಖ್ ರಾಮ್ಚೌಧರಿ ಅವರು ಸೋಮವಾರ ಮತ್ತು ಮಂಗಳವಾರದ ಅಧಿವೇಶನದಲ್ಲಿ ಭಾಗಿಯಾದರು. ಇವರು ಕೂಡ ಆಗಸ್ಟ್ 6ರಂದು ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಸದ್ಯ ಕೋವಿಡ್ 19ನಿಂದ ಚೇತರಿಸಿಕೊಂಡಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಯಾವ ಶಾಸಕರು ಕೂಡ ಅಸೆಂಬ್ಲಿಗೆ ಹಾಜರಾಗಬೇಡಿ. ಅಲ್ಲದೆ ಒಳಪ್ರವೇಶಿಸುವಾಗ ಎಲ್ಲರೂ ಥರ್ಮಲ್ ಸ್ಕ್ರೀನಿಂಗ್ಗೆ ಒಳಗಾಗುವಂತೆ ಸ್ಪೀಕರ್ ತಿಳಿಸಿದರು.